ಮೈಸೂರು: ಆಲನಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಅಪಹರಣಕಾರರಾದ ಮಂಜುನಾಥ (29), ನಾಗರಾಜು (25) ಹಾಗೂ ನವೀನ್ (32) ಎಂಬುವವರನ್ನು ಕೇವಲ ಒಂದೇ ಗಂಟೆಯಲ್ಲೇ ಬಂಧಿಸಿದ್ದಾರೆ.
ಇವರು ದೇವೇಗೌಡ ವೃತ್ತದಲ್ಲಿ ಯಶವಂತ ಎಂಬುವವರನ್ನು ಅಪಹರಿಸಿ ಅವರ ಸೋದರ ಮನು ಅವರ ಬಳಿ ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಎಸಿಪಿ ಶಶಿಧರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಚ್.ಹರಿಯಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತು.
ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿಗಳಿಗೆ 7 ವರ್ಷ ಶಿಕ್ಷೆ
ಆಸ್ಪತ್ರೆಯಲ್ಲಿ ದಾಖಲಾಗಿ ತಪ್ಪಿಸಿಕೊಂಡಿದ್ದ ಸುನೀಲ್ ಮತ್ತು ಸತೀಶ್ ಎಂಬ ಕೈದಿಗಳಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ 7 ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.
ಆಸ್ಪತ್ರೆಯಲ್ಲಿ ಮೂರ್ಛೆರೋಗ ಬಂದವರಂತೆ ನಟಿಸಿ ಇವರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ನ್ಯಾಯಾಧೀಶರಾದ ಜೆರಾಲ್ಡ್ ರುಡಾಲ್ ಮೆಂಡೋನ್ಸಾ ಅವರು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಡಿ.ಆನಂದ ಕುಮಾರ್ ವಾದ ಮಂಡಿಸಿದ್ದರು.