ಮೈಸೂರು: ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೈಸೂರು ಮತ್ತು ಕರ್ನಾಟಕದ ಬಹಳ ದೊಡ್ಡ ಪಾತ್ರ ನಿರ್ವಹಿಸಿದೆ’ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಅಭಿಯಾನದ ಪ್ರಯುಕ್ತ ನಗರದ ರಾಮಸ್ವಾಮಿ ವೃತ್ತದಲ್ಲಿ ಶಿಲಾಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಮಸ್ವಾಮಿ ಕೇವಲ 18 ವರ್ಷದವರಿದ್ದಾಗ, ಪದವಿಯ ಮೊದಲನೇ ವರ್ಷದಲ್ಲಿದ್ದಾಗಲೇ ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ್ದರು. ಬ್ರಿಟಿಷರ ವಿರುದ್ಧದ ಆ ಹೋರಾಟದಲ್ಲಿ ಹುತಾತ್ಮರಾದರು. ಇಂತಹ ಹೋರಾಟಗಾರರನ್ನು ಸ್ಮರಿಸಬೇಕು’ ಎಂದರು.
ಮೇಯರ್ ಸುನಂದಾ ಪಾಲನೇತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ್ ಸ್ವಾಮಿ, ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ ಎಂ.ಜೆ. ಪಾಲ್ಗೊಂಡಿದ್ದರು.
‘ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿ ಪ್ರಾಣಾರ್ಪಣೆಗೈದ ಅಸಂಖ್ಯಾತ ಅನಾಮಧೇಯ ವೀರರ ತ್ಯಾಗ– ಬಲಿದಾನವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದ ಶ್ರದ್ಧೆಯ ಸ್ಥಳವಾದ ರಾಮಸ್ವಾಮಿ ವೃತ್ತದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸ್ಮರಣ ಫಲಕ ಪ್ರತಿಷ್ಠಾಪಿಸಲಾಯಿತು’ ಎಂದು ಫಲಕದಲ್ಲಿ ಬರೆಯಲಾಗಿದೆ.