ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿ 14 ದಿನದಿಂದಲೂ ಕೋವಿಡ್–19 ದೃಢಪಟ್ಟಿಲ್ಲ. ಇದರಿಂದ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲಿಕ್ಕಾಗಿಯೇ ರೂಪಿಸಿದ್ದ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಕೋವಿಡ್ ಬಾಧಿತ ಪ್ರದೇಶಗಳಾದ ಮೈಸೂರು ನಗರ, ತಾಲ್ಲೂಕು ಹಾಗೂ ನಂಜನಗೂಡು ನಗರ, ತಾಲ್ಲೂಕಿನಲ್ಲಿ ಒಟ್ಟು 40 ಕಂಟೈನ್ಮೆಂಟ್ ವಲಯ (ನಿಯಂತ್ರಿತ ವಲಯ) ಘೋಷಿಸಲಾಗಿತ್ತು. ಈ ವಲಯಗಳ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ಇರಲಿಲ್ಲ. ಜನ ಸಂಚಾರಕ್ಕೂ ನಿರ್ಬಂಧವಿತ್ತು.
ನಂಜನಗೂಡು ನಗರದಲ್ಲಿ 25 ಪ್ರಕರಣ ಪತ್ತೆಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 34 ಪ್ರಕರಣಗಳು ದಾಖಲಾಗಿದ್ದವು. ಈ ಎರಡೂ ಕಡೆ 28 ನಿಯಂತ್ರಿತ ವಲಯ ರೂಪಿಸಲಾಗಿತ್ತು. ಈ ವಲಯದಲ್ಲಿ 28 ದಿನದ ಅವಧಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಬರದಿದ್ದರೆ ಮಾತ್ರ ಕಂಟೈನ್ಮೆಂಟ್ ವಲಯ ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಿದೆ.
ಇದರಂತೆ ನಂಜನಗೂಡಿನಲ್ಲಿ ಬುಧವಾರದವರೆಗೂ 10 ನಿಯಂತ್ರಿತ ವಲಯ ತೆರವುಗೊಳಿಸಲಾಗಿದೆ. ಉಳಿದ 18 ವಲಯಗಳಲ್ಲಿ ಯಾವೊಂದು ಪ್ರಕರಣ ದಾಖಲಾಗದಿದ್ದರೆ, ಮೇ 27ರೊಳಗೆ ಎಲ್ಲವೂ ಕಂಟೈನ್ಮೆಂಟ್ ಜೋನ್ನಿಂದ ಹೊರ ಬರಲಿವೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
‘ಮೇ 14ರ ಗುರುವಾರ ಆರು ಕಂಟೈನ್ಮೆಂಟ್ ಜೋನ್ ತೆರವುಗೊಂಡರೆ, ಮೇ 15ರಂದು ಎರಡು, 16 ರಂದು ಮೂರು, 17, 19 ರಂದು ತಲಾ ಎರಡು ಹಾಗೂ ಮೇ 20, 23, 27ರಂದು ತಲಾ ಒಂದೊಂದು ವಲಯಗಳು ಕಂಟೈನ್ಮೆಂಟ್ ಜೋನ್ನಿಂದ ಹೊರ ಬರಲಿವೆ’ ಎಂದು ನಂಜನಗೂಡು ತಾಲ್ಲೂಕು ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.
‘ನಂಜನಗೂಡಿನಲ್ಲಿ ವಾಸವಿರುವ ಔಷಧ ಕಂಪನಿಯ ನೌಕರನ ಸಂಪರ್ಕದಲ್ಲಿದ್ದ ಅದೇ ಕಾರ್ಖಾನೆ ಉದ್ಯೋಗಿಗೆ ಏ.29ರಂದು ಕೋವಿಡ್–19 ತಗುಲಿರು ವುದು ದೃಢಪಟ್ಟಿತ್ತು. ಈಗಾಗಲೇ ಅವರು ಮೈಸೂರಿನ ಕೋವಿಡ್–19 ಆಸ್ಪತ್ರೆಯಲ್ಲಿ 14 ದಿನದಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗುವುದಷ್ಟೇ ಬಾಕಿಯಿದೆ’ ಎಂದು ನಂಜನಗೂಡು ತಹಶೀಲ್ದಾರ್ ಕೆ.ಎಂ.ಮಹೇಶ್ಕುಮಾರ್ ಹೇಳಿದರು.