ಜಯಪುರ (ಮೈಸೂರು): ಗ್ರಾಮದ ಕೆಗ್ಗೆರೆ ಕೋಡಿ ಬಿದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಸಿಲುಕಿ ಮಾವಿನಹಳ್ಳಿ ನಿವಾಸಿ ಮಹೇಶ್ (45) ಮೃತಪಟ್ಟಿದ್ದಾರೆ.
ಮಹೇಶ್ ತಳೂರು ಗ್ರಾಮದಲ್ಲಿ ಗಾರೆ ಕೆಲಸ ಮುಗಿಸಿಕೊಂಡು ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲ್ಲಹಳ್ಳಿ ರಸ್ತೆ ಮಾರ್ಗವಾಗಿ ಮಾವಿನಹಳ್ಳಿಗೆ ಬರುತ್ತಿದ್ದಾಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, 200 ಮೀಟರ್ ದೂರದಲ್ಲಿ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.
ಜಯಪುರದಿಂದ ಮಾರ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ 30 ಅಡಿಯಷ್ಟು ಭೂಮಿ ಕುಸಿದಿದೆ. ಜಯಪುರದಿಂದ ಕಡಕೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ₹50 ಸಾವಿರ ಪರಿಹಾರ ನೀಡಿದರು.
ಜಿಲ್ಲಾಧಿಕಾರಿಗೆ ಕರೆ ಮಾಡಿದ ಶಾಸಕರು, ಮೃತರ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದರು.
ಜಯಪುರ ಠಾಣಾ ಕ್ರೈಂ ಸಬ್ ಇನ್ಸ್ಪೆಕ್ಟರ್ ಹೇಮಲತಾ, ನಾಡ ಕಚೇರಿ ಉಪತಹಶೀಲ್ದಾರ್ ಮಂಜುನಾಥ್, ಕಂದಾಯ ಅಧಿಕಾರಿ ಲೋಹಿತ್ ಭೇಟಿ ನೀಡಿ ಪರಿಶೀಲಿಸಿದರು.