ಮೈಸೂರು: ಶಾಲೆಗಳು ಸರ್ಕಾರದ ಕೈಯಲ್ಲಿವೆಯೇ ಹೊರತು ಸರ್ಕಾರವೇ ಶಾಲೆಗಳ ಕೈಯಲಿಲ್ಲ. ಶುಲ್ಕ ಪಾವತಿ ಕುರಿತು ಮಕ್ಕಳು ಮತ್ತು ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಇಲ್ಲಿ ಬುಧವಾರ ಸುದ್ದಿಗಾರರಿಗೆ ಹೇಳಿದರು.
ಶುಲ್ಕ ಪಾವತಿಸುತ್ತಿಲ್ಲ ಎಂದು ಆನ್ಲೈನ್ ತರಗತಿಯಿಂದ ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ತೆಗೆಯುತ್ತಿರುವುದು ಸರಿಯಲ್ಲ ಎಂದು ಇಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ತರಗತಿಗಳೇ ನಡೆಯದಿರುವಾಗ ಶುಲ್ಕ ಪಾವತಿಸಿ ಎನ್ನುವುದು ಸರಿಯಲ್ಲ. ಈ ಕುರಿತು ಸಚಿವ ಸುರೇಶ್ಕುಮಾರ್ ಕಠಿಣ ಕ್ರಮ ಕೈಗೊಳ್ಳಬೇಕು. ಖಾಸಗಿ ಶಾಲೆಯವರ ಜತೆ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನಿಯಿಂದ ಹಿಡಿದು ಎಲ್ಲ ಜನಪ್ರತಿನಿಧಿಗಳ ಗೌರವಧನದ ಶೇ 30ರಷ್ಟನ್ನು ಕೋವಿಡ್ ಕಾರಣಕ್ಕೆ ಕಡಿತ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳ ಸಂಬಳವನ್ನು ಕಡಿತ ಮಾಡಿಲ್ಲ. ಸರ್ಕಾರದ ಬೊಕ್ಕಸ ಖಾಲಿ ಇರುವುದರಿಂದ ಸಾಲ ತರಲಾಗುತ್ತಿದೆ. ಅಧಿಕಾರಿಗಳ ಸಂಬಳವನ್ನೂ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.