ಮೈಸೂರು: ಇಲ್ಲಿನ ನರಸಿಂಹರಾಜ ಠಾಣೆಯ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ, ₹ 2.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ₹ 30 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇವರು ಕಳವು ಮಾಡಿದ್ದ 65 ಗ್ರಾಂ ತೂಕದ ಚಿನ್ನಾಭರಣಗಳನ್ನು ಉದಯಗಿರಿಯಲ್ಲಿ ಮಾರಾಟ ಮಾಡಲು ಯತ್ನಿಸಿದಾಗ ಅಂಗಡಿಯವರಿಗೆ ಅನುಮಾನ ಬಂದು ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಪತ್ತೆಯಾಗಿದೆ.
ಜ. 5ರಂದು ಕರುಣಾಪುರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಂದ, ಆರ್.ಎಸ್.ನಾಯ್ಡುನಗರದ ಡೋಬಿಘಾಟ್ ಬಳಿ ಫೆ. 06ರಂದು ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಚಿನ್ನದ ಸರವನ್ನು ಇವರು ಕಳವು ಮಾಡಿದ್ದರು.
ಜತೆಗೆ, ಕೆ.ಆರ್.ಮೊಹಲ್ಲಾದ ರಾಮಾನುಜರಸ್ತೆಯಲ್ಲಿ ದ್ವಿಚಕ್ರವಾಹನವೊಂದನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.