ಮೈಸೂರು: ಬಾಕಿ ಉಳಿದಿರುವ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯರು, ಕಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಇಂಟರ್ನಿಗಳು ಶುಕ್ರವಾರ ಬೃಹತ್ ಪ್ರತಿಭಟನ ಜಾಥಾ ನಡೆಸಿದರು.
ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಗುರುವಾರದರಿಂದ ಪ್ರತಿಭಟನೆಗಳು ಆರಂಭವಾಗಿದ್ದು, ಇದರ ಪ್ರಯುಕ್ತ ವೈದ್ಯರು ಜಾಥಾ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೆ.ಆರ್.ಆಸ್ಪತ್ರೆಯಿಂದ ಇರ್ವಿನ್ ರಸ್ತೆ, ಜೆಎಲ್ಬಿ ರಸ್ತೆ, ವಿನೋಬಾ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಸುಮಾರು 200 ಮಂದಿ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
‘ಕೋವಿಡ್ ಕಾಲದಲ್ಲೂ ಅವಿರತ ಸೇವೆ ಸಲ್ಲಿಸಿದ್ದೇವೆ. ಆದರೆ, ಕಳೆದೆರಡು ತಿಂಗಳುಗಳಿಂದ ಸಂಬಳ ಪಾವತಿಸಿಲ್ಲ, ಭತ್ಯೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಕರ್ತವ್ಯ ನಿರ್ವಹಿಸಿದ ಕಿರಿಯ ವೈದ್ಯರಿಗೆ ಕೋವಿಡ್ ಕರ್ತವ್ಯ ನಿರ್ವಹಣೆ ಭತ್ಯೆಯನ್ನು ಸರ್ಕಾರ ಘೋಷಿಸಿದಂತೆ ಭತ್ಯೆ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಶಿಷ್ಯವೇತನವನ್ನೂ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ವಿಜಯಕುಮಾರ್, ಉಪಾಧ್ಯಕ್ಷರಾದ ಡಾ.ಕೆ.ಕೆ.ಅಬ್ದುಲ್ಲಾ, ಡಾ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಡಾ.ವಿಶಾಲ್ ಹುಬ್ಬಳ್ಳಿ, ಡಾ.ಸಂದೀಪ್ ಗಂಗಾ, ಡಾ.ಎ.ಪೂರ್ಣಿಮಾ, ಡಾ.ಶಿವಾನಂದ, ಡಾ.ಕಿಶೋರ್ ಇದ್ದರು.