ಮೈಸೂರು: ನಗರ ಮತ್ತು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿದಿದ್ದು, ತಂಪನೆರೆದಿದೆ.
ನಗರದಲ್ಲಿ ಸಂಜೆ ಆರಂಭವಾದ ಜಿಟಿಜಿಟಿ ಮಳೆ ವಾತಾವರಣವನ್ನು ತಂಪುಗೊಳಿಸಿತು. ಬೀಸುತ್ತಿದ್ದ ಕುಳಿರ್ಗಾಳಿ ಶೀತಮಯ ವಾತಾವರಣ ಸೃಷ್ಟಿಸಿತು.
ಆಟೊನಿಲ್ದಾಣ ಹಾಗೂ ಇತರೆಡೆ ಆಚರಿಸಲಾಗುತ್ತಿದ್ದ ಆಷಾಢ ಶುಕ್ರವಾರದ ಪೂಜೆಗಳಿಗೆ ಹಲವೆಡೆ ತೊಂದರೆಯಾಯಿತು. ಮಳೆಯಲ್ಲೇ ಕೆಲವೆಡೆ ಪೂಜೆ ಮುಗಿಸಿ, ಪ್ರಸಾದ ವಿತರಿಸಲಾಯಿತು.
ಮೂಲೆ ಸೇರಿದ್ದ ಕೊಡೆಗಳಿಗೆ ಮತ್ತೆ ಜೀವಕಳೆ ಬಂದಿತು. ಕೊಡೆ ಹಿಡಿದು ಹಲವು ಮಂದಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಚಿಣ್ಣರು ಮಳೆಯಲ್ಲಿ ನೆನೆಯುತ್ತ ಟ್ಯೂಷನ್ನಿಂದ ಮನೆಯತ್ತ ಹೆಜ್ಜೆ ಹಾಕಿದರು.
ಎಚ್.ಡಿ.ಕೋಟೆ ಹಾಗೂ ಕೆ.ಆರ್.ನಗರದಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾದರೆ, ಪಿರಿಯಾಪಟ್ಟಣದಲ್ಲಿ 45 ನಿಮಿಷ ಮಳೆ ಸುರಿದಿದೆ. ಹುಣಸೂರು ಮತ್ತು ತಿ.ನರಸೀಪುರದಲ್ಲಿ ತುಂತುರು ಮಳೆಯಾಗಿದೆ.
ಮಳೆಯಿಂದ ಬಿತ್ತನೆಗೇನೂ ಅನುಕೂಲವಾಗಿಲ್ಲ. ಇನ್ನಷ್ಟು ಮಳೆ ಸುರಿದರೆ ಮಾತ್ರ ಮುಂಗಾರು ಬಿತ್ತನೆ ಮಾಡಬಹುದು. ಈಗಾಗಲೇ ಬಿತ್ತನೆಯಾಗಿರುವ ಕಡೆ ಮೊಳೆಕೆ ಹೊಡೆದಿರುವ ಪೈರುಗಳಿಗೆ ಜೀವ ತರಿಸಿದಂತಾಗಿದೆ.