ಮೈಸೂರು: ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಮಕ್ಕಳು ಇಂಗ್ಲಿಷ್ ಮಾತನಾಡುವಂತಾದರೆ ನಮ್ಮ ಭಾಷೆ ಉಳಿಯುವುದಾದರೂ ಹೇಗೆ ಎಂದು ರಂಗಕರ್ಮಿ ರಾಜಶೇಖರ ಕದಂಬ ಪ್ರಶ್ನಿಸಿದರು.
ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ವಾಕ್ ಮತ್ತು ಶ್ರವಣ ಕಾಲೇಜು, ಫಿಸಿಯೋಥೆರಫಿ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ನರ್ಸಿಂಗ್ ಶಾಲೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಭವಿಷ್ಯಕ್ಕಾಗಿ, ಜೀವನಕ್ಕಾಗಿ ಬೇರೆ ಭಾಷೆಗಳನ್ನು ಕಲಿಯಬೇಕು. ಕನ್ನಡ ನಮ್ಮ ತಾಯಿಯಾದರೆ ಬೇರೆ ಭಾಷೆಗಳು ನಮ್ಮ ಸಂಬಂಧಿಕರು. ಆದರೆ, ನಮ್ಮ ಭಾಷೆಯನ್ನು ಬಿಡಬಾರದು. ಎಲ್ಲ ಸಂವಹನಗಳೂ ಕನ್ನಡದಲ್ಲಿಯೇ ನಡೆಯಬೇಕು ಎಂದು ಅವರು ಹೇಳಿದರು.
ನವೆಂಬರ್ ತಿಂಗಳಿನಲ್ಲಿ ಮಾತ್ರವೇ ಕನ್ನಡಾಭಿಮಾನ ಕಾಣುತ್ತದೆ. ಉಳಿದ ತಿಂಗಳುಗಳಲ್ಲಿ ಇದು ಕಾಣುವುದಿಲ್ಲ. ಈ ಪ್ರವೃತ್ತಿ ನಿಜಕ್ಕೂ ಸರಿಯಲ್ಲ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕನ್ನಡದ ಹಾಡುಗಳನ್ನು ಹಾಡಿದರು. ಮಲೆಯಾಳಂ ಮಾತೃಭಾಷೆಯಾಗಿರುವ ಯುವತಿಯೋರ್ವರು ‘ಈ ಕನ್ನಡ ಮಣ್ಣನು ಮರಿಬೇಡ.. ಓ ಅಭಿಮಾನಿ’ ಎಂದು ಹಾಡಿದ ಹಾಡು ಪ್ರೇಕ್ಷಕರ ಮನಗೆದ್ದಿತು.
ಜೆಎಸ್ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಇದ್ದರು.