ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟ: ರಸ್ತೆ ತಡೆಗೋಡೆ ದುರಸ್ತಿ ಆರಂಭ, ಮಳೆ ಹಾನಿ ತಪ್ಪಿಸಲು ಕ್ರಮ

Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟಕ್ಕೆ ತೆರಳುವ ರಸ್ತೆಗಳ ತಡೆಗೋಡೆಗಳ ದುರಸ್ತಿ ಕಾಮಗಾರಿ ಆರಂಭವಾಗಿದೆ. ಸದ್ಯ ರಸ್ತೆಯ ಇಕ್ಕೆಲಗಳಲ್ಲೂ ಕಾಂಕ್ರೀಟ್‌ ಹಾಕಲಾಗುತ್ತಿದೆ. ಇದು ಮುಂದಿನ ಮಳೆಗಾಲದಲ್ಲಿ ಬೆಟ್ಟದ ರಸ್ತೆಗಳು ಮತ್ತಷ್ಟು ಕುಸಿಯುವ ಭೀತಿಯಿಂದ ದೂರ ಮಾಡಿದೆ.

ಲೋಕೋಪಯೋಗಿ ಇಲಾಖೆಯು ₹ 14 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಆರಂಭಿಸಿದ್ದು, ತಡೆ ಗೋಡೆ ಕುಸಿದಿರುವೆಡೆ ಹೊಸ ಕಲ್ಲುಗಳನ್ನು ಸುರಿಯಲಾಗಿದೆ. ಇದೀಗ ರಸ್ತೆಯ ಇಳಿಜಾರಿನಲ್ಲಿ ಹರಿಯುವ ಮಳೆನೀರು ಕೊರೆಯದಂತೆ ಕಾಂಕ್ರೀಟ್‌ ಹಾಕಲಾಗುತ್ತಿದೆ.

ಭಾರಿ ಮಳೆಯಾದರೆ ಇದೇ ರಸ್ತೆಯುದ್ದಕ್ಕೂ ಕಿರು ಜಲಪಾತಗಳು ಸೃಷ್ಟಿಯಾಗುತ್ತವೆ. ಇಂಥ ಕಡೆ ಮಳೆ ನೀರಿನ ಚರಂಡಿಗಳನ್ನು ಈ ಮೊದಲೇ ನಿರ್ಮಾಣ ಮಾಡಲಾಗಿದೆ. ಬೆಟ್ಟದಿಂದ ಇಳಿದ ನೀರು ಸರಾಗವಾಗಿ ಹರಿದುಹೋಗಲು ಕಿರು ಸೇತುವೆಗಳು ಇದ್ದು, ಅವುಗಳನ್ನೂ ಕಾಂಕ್ರೀಟ್‌ನಿಂದ ಬಿಗಿ ಮಾಡಲಾಗಿದೆ.

ರಸ್ತೆಗೆ ಡಾಂಬಾರು: ‘ಉತ್ತನಹಳ್ಳಿ ಕಡೆಯ ರಸ್ತೆಗೆ ಡಾಂಬರು ಹಾಕಲಾಗಿದೆ. ವೈಟ್‌ ಟಾಂಪಿಂಗ್‌ ಸಹ ಮಾಡಲಾಗಿದೆ. ಡಾಂಬರಿನ ನಂತರ ಇಕ್ಕೆಲಗಳಲ್ಲಿ ಕಾಂಕ್ರೀಟ್‌ ಹಾಕಲಾಗಿದೆ. ಕಾಮಗಾರಿ ಮುಗಿದಿದ್ದು, ಕ್ಯೂರಿಂಗ್‌ ಮಾಡಲಾಗುತ್ತಿದೆ’ ಎಂದು ಕಾರ್ಮಿಕ ಸುಬ್ರಹ್ಮಣ್ಯ ಹೇಳಿದರು.

ಉತ್ತನಹಳ್ಳಿ ಮಾರ್ಗದ ಅರಳೀಮರ ವೃತ್ತದಲ್ಲಿ ಸಿಮೆಂಟ್‌, ಎಂ ಸ್ಯಾಂಡ್‌ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ರಾಶಿ ಬಿದ್ದಿದ್ದು, ಜೆಸಿಬಿ ಯಂತ್ರಗಳು, ಟ್ರ್ಯಾಕ್ಟರ್‌ಗಳು ನಿಂತಿರುವ ದೃಶ್ಯ ಬುಧವಾರ ಬೆಳಿಗ್ಗೆ ಕಂಡು ಬಂತು. ಟ್ರಕ್‌ಗಳು ಕಲ್ಲುಗಳನ್ನು ಹೊತ್ತು ತರುತ್ತಿದ್ದವು. ಟ್ರ್ಯಾಕ್ಟರ್‌ ಮೂಲಕ ರಸ್ತೆಯ ಬದಿಯ ಕಾಂಕ್ರೀಟ್‌ ನೀರು ಹಾಯಿಸಲಾಗುತ್ತಿತ್ತು. ಕ್ಯೂರಿಂಗ್‌ ಆದ ನಂತರ ತಡೆಗೋಡೆ ನಿರ್ಮಾಣ ಆರಂಭವಾಗಲಿದೆ.

‘ಶಿಥಿಲಗೊಂಡ ತಡೆಗೋಡೆಗಳನ್ನು ಮಳೆಗಾಲಕ್ಕೂ ಮುನ್ನ ದುರಸ್ತಿ ಮಾಡಲಾಗುತ್ತಿದೆ. ಕಾಮಗಾರಿಗೆ ₹ 14 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ರಸ್ತೆಗೆ ₹ 7 ಲಕ್ಷ, ಉತ್ತನಹಳ್ಳಿ ಮಾರ್ಗಕ್ಕೆ ₹ 3 ಲಕ್ಷ, ನಂದಿ ಮಾರ್ಗಕ್ಕೆ ₹ 2 ಲಕ್ಷ, ಕೊಣನೆರೆ ರಸ್ತೆಯ ತಡೆಗೋಡೆ ದುರಸ್ತಿಗೆ ₹ 2 ಲಕ್ಷ ನೀಡಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಯ ಪಕ್ಕ ಕಾಂಕ್ರೀಟ್‌ ಹಾಕುತ್ತಿರುವುದರಿಂದ ರಸ್ತೆ ಅಂಚು ಮಳೆ ನೀರಿನ ಕೊರೆತಕ್ಕೆ ಸಿಲುಕುವುದಿಲ್ಲ. ಅಲ್ಲದೇ ಅಪಘಾತಗಳನ್ನು ತಪ್ಪಿಸಲಿದೆ.

ಕುಸಿದ ನಂದಿ ರಸ್ತೆ ದುರಸ್ತಿ ಯಾವಾಗ?: ನಂದಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಈ ಬೇಸಿಗೆಯಲ್ಲಿ ಆರಂಭವಾಗಬೇಕಿತ್ತು. ಆದರೆ, ದುರಸ್ತಿಗೊಳಿಸುವ ಯಾವುದೇ ಕುರುಹು ಕಾಣುತ್ತಿಲ್ಲ.

ನಂದಿ ರಸ್ತೆಯ ಒಂದು ಭಾಗ ಕುಸಿದಾಗ ತಾತ್ಕಾಲಿಕ ದುರಸ್ತಿಗೆ ಮಣ್ಣನ್ನು ಈ ಹಿಂದೆ ಸುರಿಯಲಾಗಿತ್ತು. ಅದು ಇತ್ತೀಚಿನ ಮಳೆಗೆ ಕರಗುತ್ತಿದೆ. ರಸ್ತೆಯುದ್ದಕ್ಕೂ ಬಿರುಕು ಮೂಡಿದ್ದು, ಮಳೆ ಬಂದಾಗಲೆಲ್ಲ ಕುಸಿಯುತ್ತಾ ಸಾಗಿದೆ. ನಂದಿ ರಸ್ತೆ ಕಾಮಗಾರಿಯನ್ನು ಶೀಘ್ರ ಕೈಗೊಳ್ಳದಿದ್ದರೆ ಸಂಚಾರ ತೆರವಿಗೆ ಇನ್ನೆತರಡು ಬೇಸಿಗೆಗೆ ನಾಗರಿಕರು ಕಾಯಬೇಕಾಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT