ಮೈಸೂರು: ಮತದಾರರಿಗೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದರೆ ರಾಜಕೀಯ ಜೀವನ ಹೇಗೆ ದುರಂತ ಅಂತ್ಯ ಕಾಣುತ್ತದೆ ಎಂಬುದಕ್ಕೆ ವಿಶ್ವನಾಥ್ ಉತ್ತಮ ಉದಾಹರಣೆ. ಇವರಿಗೆ ಒದಗಿದ ಸ್ಥಿತಿ ಎಲ್ಲ ಪಕ್ಷದ ರಾಜಕಾರಣಿಗಳಿಗೆ ದೊಡ್ಡ ಪಾಠ ಎಂದು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದರು.
ಜೆಡಿಎಸ್ ಹಾಕಿದ ಭಿಕ್ಷೆಯಿಂದ ಇವರು ಚಲಾವಣೆಗೆ ಬಂದರು. ಇವರ ಮೇಲೆ ಪಕ್ಷದ ಕಾರ್ಯಕರ್ತರ ಋಣ ಇದೆ. ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡುವ ನೈತಿಕತೆ ಇವರಿಗೆ ಇಲ್ಲ. ಇನ್ನು ಮುಂದೆ ಹಗುರ ಮಾತನಾಡಬಾರದು ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಇನ್ನು ವಿಶ್ವನಾಥ್ ಅವರು ರಾಜಕೀಯದಲ್ಲಿ ಮುಂದುವರಿಯಬೇಕಾದರೆ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಮುಂದೆ ಬರುತ್ತವೆ. ಅವುಗಳಲ್ಲಿ ಬೇಕಾದರೆ ಸ್ಪರ್ಧಿಸಲಿ ಎಂದು ಚಾಟಿ ಬೀಸಿದರು.