ಮೈಸೂರು: ಸಾಲ ಕೊಡಿಸುವುದಾಗಿ ಮುಂಗಡ ಪಡೆದಿದ್ದ ವ್ಯಕ್ತಿಯೊಬ್ಬ, ಹಣ ಕೊಟ್ಟವರ ಒತ್ತಡ ಸಹಿಸಲಾಗದೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿ ಮಂಗಳವಾರ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ರಾಧಾಕೃಷ್ಣನನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಒಂದೂವರೆ ಇಂಚಿನಷ್ಟು ಆಳದ ಗಾಯವಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ರೋಜಗಾರ್ ಯೋಜನೆಯಡಿ ಸಾಲ ಕೊಡಿಸುತ್ತೇನೆಂದು ಹೇಳಿ ರಾಧಾಕೃಷ್ಣ ಕೆಲವರಿಂದ ಮುಂಗಡವಾಗಿ ಹಣ ಪಡೆದಿದ್ದರು. ಕೋವಿಡ್ನಿಂದ ಬ್ಯಾಂಕ್ಗಳಲ್ಲಿ ಸಕಾಲಕ್ಕೆ ಸಾಲ ಮಂಜೂರಾಗಿರಲಿಲ್ಲ.
ಹಣ ಕೊಟ್ಟವರು ವಾಪಸ್ ನೀಡುವಂತೆ ನಿತ್ಯವೂ ಕೇಳಿದ್ದಾರೆ. ಎಂದಿನಂತೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿದ್ದ ಸಂದರ್ಭ, ಹಣ ಕೊಟ್ಟವರು ಬಂದು ಕೊಟ್ಟ ದುಡ್ಡು ಮರಳಿಸುವಂತೆ ಒತ್ತಾಯಿಸಿದ್ದಾರೆ.
ಒತ್ತಡ ತಾಳಲಾರದ ರಾಧಾಕೃಷ್ಣ ಮೂತ್ರ ವಿಸರ್ಜಿಸಿ ಬರುವೆ ಎಂದು ಉದ್ಯಾನದ ಬೇಲಿ ಬದಿಗೆ ತೆರಳಿ ಚಾಕುವಿನಿಂದ ಚುಚ್ಚಿಕೊಂಡು ಗಾಯಗೊಂಡಿದ್ದಾರೆ. ಈತನ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲಕ್ಷ್ಮೀಪುರಂ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.