ಮೈಸೂರು: ಗುಂಡ್ಲುಪೇಟೆಯಲ್ಲಿ ಸೆರೆ ಸಿಕ್ಕ ನರಭಕ್ಷಕ ಹುಲಿಯನ್ನು ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸೇರಿದ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೃಗಾಲಯದ ಪಶುವೈದ್ಯ ಡಾ.ರಮೇಶ್, ‘ಹುಲಿಯು ನೆನ್ನೆಯಷ್ಟೇ ಬಂದಿದೆ. ಇದರ ಮೇಲೆ ನಿಗಾ ಇರಿಸಲಾಗಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.
ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, ‘ಹುಲಿ ಮೊದಲು ಈ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ನಂತರವಷ್ಟೇ ಅದನ್ನು ಏನು ಮಾಡಬೇಕು ಎಂದು ಚಿಂತನೆ ನಡೆಸಲಾಗುವುದು. ಇನ್ನೂ ಒಂದಷ್ಟು ಅದನ್ನು ಪುನರ್ವಸತಿ ಕೇಂದ್ರದಲ್ಲಿಯೇ ಇರಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಮೃಗಾಲಯದ ಹುಲಿ ಸೇರಿದಂತೆ ಈಚೆಗೆ ನಾಗರಹೊಳೆ ಹಾಗೂ ಇತರೆಡೆ ಸೆರೆ ಹಿಡಿದ ಹುಲಿಗಳೂ ಸೇರಿದಂತೆ ಒಟ್ಟು 6 ಹುಲಿಗಳು ಪುನರ್ವಸತಿ ಕೇಂದ್ರದಲ್ಲಿವೆ.