ಮೈಸೂರು: ಮುಂಗಾರು ಪೂರ್ವ ಮಳೆಗಳಾದ ‘ಭರಣಿ, ಅಶ್ವಿನಿ’ಸಕಾಲಕ್ಕೆ ಸುರಿಯದಿದ್ದರಿಂದ ಜಿಲ್ಲೆಯಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿತ್ತು. ಜೂನ್ ಮೊದಲ ವಾರಕ್ಕೆ ಕೊನೆಗೊಳ್ಳಬೇಕಿದ್ದ ನಾಟಿಯ ಕೆಲಸ ಮುಂಗಾರಿನಲ್ಲಿ ಚುರುಕುಗೊಂಡಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ.
ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕಿನ 60 ಸಾವಿರಕ್ಕೂ ಹೆಚ್ಚು ಕೃಷಿಕ ಕುಟುಂಬಗಳ ಪ್ರಧಾನ ವಾಣಿಜ್ಯ ಬೆಳೆ ತಂಬಾಕು. ಪೂರ್ವ ಮುಂಗಾರು ವರ್ಷಧಾರೆ ಸಕಾಲಕ್ಕೆ ಸುರಿಯದಿದ್ದರಿಂದ, ಈ ಬಾರಿ ಬಹುತೇಕ ಬೆಳೆಗಾರರಿಗೆ ಮಳೆಯಾಶ್ರಿತ ಬೆಳೆಯಾದ ತಂಬಾಕಿನ ನಾಟಿಗೆ ಅವಕಾಶವೇ ಸಿಕ್ಕಿರಲಿಲ್ಲ.
ಮುಂಗಾರಿನ ಸಿಂಚನದೊಂದಿಗೆ ನಾಟಿಯೂ ಚುರುಕುಗೊಂಡಿದೆ. ಭರಣಿ, ಅಶ್ವಿನಿ ಮಳೆಗೆ ನಾಟಿ ಮಾಡಿ
ದರೆ ಮಾತ್ರ ಬಂಪರ್ ಇಳುವರಿ ಬರಲಿದೆ. ನಂತರ ನಾಟಿ ಮಾಡಿದರೆ ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪನ್ನ ಸಿಗಲ್ಲ. ಇಳುವರಿಯೂ ಅರ್ಧದಷ್ಟು ಕುಸಿಯ
ಲಿದೆ. ಇದು ಗೊತ್ತಿದ್ದರೂ ಬ್ಯಾಂಕ್ನಿಂದ ಸಾಲ ಪಡೆದು, ಅಗತ್ಯ ಸಿದ್ಧತೆಗಳನ್ನು ನಡೆಸಿಕೊಂಡಿದ್ದ ತಪ್ಪಿಗೆ ಇದೀಗ ನಾಟಿ ನಡೆದಿದೆ ಎನ್ನುತ್ತಾರೆ ಬೆಟ್ಟದಪುರದ ತಂಬಾಕು ಬೆಳೆಗಾರ ಆರ್.ವೆಂಕಟೇಶ್.
‘ಒಂಬತ್ತು ಎಕರೆಯಲ್ಲಿ ತಂಬಾಕು ಸಸಿ ನಾಟಿ ಮಾಡಿರುವೆ. ಈ ವೇಳೆಗಾಗಲೇ ಗಿಡಗಳಿಗೆ ಒಂದು ಸುತ್ತು ಗೊಬ್ಬರ ನೀಡಬೇಕಿತ್ತು. ಸಸಿ ಬೆಳವಣಿಗೆಯ ಹಂತದಲ್ಲಿರಬೇಕಿತ್ತು. ಮಳೆಯ ಅಭಾವದಿಂದ ಇದು ಸಾಧ್ಯವಾಗಿಲ್ಲ. ಇದೀಗ ಎರಡು ದಿನದಿಂದ ಸುರಿಯುತ್ತಿರುವ ಸೋನೆ ಮಳೆಯೂ ಸಾಕಾಗಲ್ಲ. ಈ ವರ್ಷ ಮಳೆ ಸಾಕಷ್ಟು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಹೇಗೆ ನಡೆಸುತ್ತೆ? ಎಂಬುದೇ ಆತಂಕ ಸೃಷ್ಟಿಸಿದೆ’ ಎಂದರು.
‘ಹಿಂದಿನ ವರ್ಷದ ಹರಾಜಿನ ಕೊನೆಯ ದಿನಗಳಲ್ಲಿ ಖರೀದಿದಾರರು ಉದ್ದೇಶ ಪೂರ್ವಕವಾಗಿ ಒಂದು ಕೆ.ಜಿ. ತಂಬಾ
ಕನ್ನು ₹ 230ರ ದರದವರೆಗೂ ಖರೀದಿಸಿದರು. ಇದು ಕೇವಲ ಶೇ 1ರಷ್ಟು ಸೊಪ್ಪಿಗೆ ಮಾತ್ರ. ಉಳಿದ ಸೊಪ್ಪು ಕಾಸಿಗೆ ಕಡೆಯಾಗಿ ಮಾರಾಟವಾಗಿತ್ತು. ಸಾಕಷ್ಟು ಬೆಳೆಗಾರರು ನಷ್ಟವನ್ನು ಅನುಭವಿಸಿದರು.’
‘ಆದರೂ ಕೊನೆ ದಿನಗಳಲ್ಲಿ ಹೆಚ್ಚಿನ ಬೆಲೆ ಬಂದಿದ್ದನ್ನು ಗಮನಿಸಿದ ಅಸಂಖ್ಯಾತ ಬೆಳೆಗಾರರು ಈ ವರ್ಷ ಉತ್ತಮ ಧಾರಣೆ ಸಿಗಬ
ಹುದು ಎಂಬ ನಿರೀಕ್ಷೆಯಿಂದ ತಮ್ಮ ಜಮೀನಿನಲ್ಲಿ ಹೆಚ್ಚಿನ ನಾಟಿ ಮಾಡಿದ್ದಾರೆ. ಕೃಷಿಕರ ಉತ್ಸಾಹಕ್ಕೆ ತಂಬಾಕು ಮಂಡಳಿಯೂ ಸಾಥ್ ನೀಡಿದೆ. ಹೆಚ್ಚು ತಂಬಾಕು ಉತ್ಪಾ
ದಿಸಲು ಪರವಾನಗಿ ನೀಡಿದೆ’ ಎಂದು ವೆಂಕಟೇಶ್ ಮಾಹಿತಿ ನೀಡಿದರು.
ಮಳೆ ಕೊರತೆ: ತಡವಾದ ನಾಟಿ
‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ 38ರಷ್ಟು ಮಳೆ ಕಡಿಮೆ ಸುರಿದಿದೆ. ಇದರಿಂದ ತಂಬಾಕು ನಾಟಿಗೆ ಹಿನ್ನಡೆಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.
‘ಏಪ್ರಿಲ್ ಅಂತ್ಯದಿಂದ ಜೂನ್ ಮೊದಲ ವಾರದೊಳಗೆ ತಂಬಾಕಿನ ಸಸಿ ನಾಟಿ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿತ್ತು. ಆದರೆ ಈ ಬಾರಿ ಎರಡು ವಾರ ವಿಳಂಬವಾಗಿದೆ. ನಿಗದಿ ಪಡಿಸಿದ ಗುರಿಯನ್ನು ಜೂನ್ ಮೂರನೇ ವಾರದಲ್ಲಿ ಪೂರ್ಣಗೊಳಿಸಲಿದ್ದೇವೆ’ ಎಂಬ ವಿಶ್ವಾಸವನ್ನು ಅವರು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.