ಹುಣಸೂರು: ನಾಗಾಪುರ ಗಿರಿಜನಪುನರ್ವಸತಿ ಕೇಂದ್ರದ ಫಲಾನುಭವಿಗಳನ್ನು 23 ವರ್ಷಗಳ ಬಳಿಕ ಸರ್ಕಾರವು ರೈತ ಉತ್ಪನ್ನ ಸಹಕಾರ ಸಂಘದ ಷೇರುದಾರರನ್ನಾಗಿಸಲು ಮುಂದಾಗಿದೆ. ಈ ಕಾರಣದಿಂದ ಸಮುದಾಯದಲ್ಲಿ ಹುಮ್ಮಸ್ಸು ಹೆಚ್ಚಿದೆ.
ನ.26ರಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೈತ ಉತ್ಪಾದಕ ಸಂಸ್ಥೆಗೆ ಸಚಿವ ಬಿ.ಶ್ರೀರಾಮುಲು ಹಸಿರು ನಿಶಾನೆ ತೋರುತ್ತಿರುವುದರಿಂದ ನಾಗರಹೊಳೆ ಅರಣ್ಯದಿಂದ 1997ರಲ್ಲಿ ಹೊರಬಂದಿದ್ದ ಗಿರಿಜನರ 280 ಕುಟುಂಬಗಳನ್ನು ಅಭಿವೃದ್ಧಿಯತ್ತ ಸೆಳೆದುಕೊಂಡಂತಾಗಿದೆ.
‘2 ದಶಕಗಳಿಂದ ಬದುಕು ಕಟ್ಟಿ ಕೊಳ್ಳಲು ಕಾಫಿ ತೋಟ ದಲ್ಲಿ ಕೂಲಿ ಕಾರ್ಮಿಕರಾಗಿ ಜೀವನ ಸವೆಸುತ್ತಿದ್ದೆವು. ತಮ್ಮದೇ ಕೃಷಿ ಚಟುವಟಿಕೆ ಯಲ್ಲಿ ತೊಡಗಿ ಕೃಷಿ ಉತ್ಪನ್ನ ಮಾರಾಟ, ಸವಲತ್ತು ಪಡೆಯಲು ಸಹಕಾರಿ ಸಂಘ ಅಗತ್ಯವಾಗಿತ್ತು. ಅದು ಈಗ ಈಡೇರುತ್ತಿದೆ’ ಎನ್ನುತ್ತಾರೆ ಪುನರ್ವಸತಿ ಕೇಂದ್ರದ ಕೃಷಿಕ ಜೆ.ಕೆ.ಬಸವಣ್ಣ.
‘10 ವರ್ಷದಿಂದ ಮುಸುಕಿನ ಜೋಳ ಬೆಳೆಯುತ್ತಿದ್ದೇನೆ. ನಾವು ಬೆಳೆದ ಕೃಷಿ ಉತ್ಪನ್ನ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಈಗ ಸರ್ಕಾರ ಕೃಷಿ ಉತ್ಪನ್ನ ಸಹಕಾರಿ ಸಂಘ ಆರಂಭಿಸುತ್ತಿರುವುದರಿಂದ ಗಿರಿಜನರಲ್ಲೂ ಕೃಷಿ ಕ್ಷೇತ್ರದ ಮೇಲೆ ಹೊಸ ಆಸೆ ಚಿಗುರಿದೆ’ ಎಂದರು.
ಪದವೀಧರ ಗಿರಿಜನ ಮಹಿಳೆ ಟಿ.ಬಿ.ವೀಣಾ ಮಾತ ನಾಡಿ, ಗಿರಿಜನ ಮಹಿಳೆಯರು ಜಾನುವಾರು ಸಾಕಾಣಿಕೆಯಲ್ಲಿ ನಿಪುಣರು. ಸರ್ಕಾರ ನೀಡಿದ ಭೂಮಿ ಯಲ್ಲಿ ಬೇಸಾಯ ಹಾಗೂ ಹೈನುಗಾರಿಕೆ ಚಟುವಟಿಕೆಯಿಂದ ಆರ್ಥಿಕವಾಗಿ ಸದೃಢರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದರು.
ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು ಮಾತನಾಡಿ, 23 ವರ್ಷದ ಬಳಿಕ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ರೈತ ಉತ್ಪಾದಕ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘ ಆರಂಭಿಸಿ ಸಹಕಾರಿ ತತ್ವದಲ್ಲಿ ಗಿರಿಜನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯ ಎಂದರು.
ಕೇಂದ್ರದ ಫಲಾನುಭವಿಗಳು ವಾಸವಿರುವ ಮನೆ ಮತ್ತು ಕೃಷಿ ಭೂಮಿಯ ಮಾಲೀಕತ್ವದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಕೃಷಿ ಸಾಲ ಸಿಗದೆ ಖಾಸಗಿ ವ್ಯಕ್ತಿಗಳ ಮೊರೆಹೋಗಬೇಕಾದ ಸ್ಥಿತಿಯೂ ಇದೆ ಎಂದು ಬೇಸರ ವ್ಯಕ್ತಪಡಿಸಿದರು.