ಮೈಸೂರು: ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದೆಡೆ ತರಕಾರಿಗಳ ಆವಕ ಹೆಚ್ಚಾಗಿ ಬೆಲೆ ಕುಸಿಯುತ್ತಿದ್ದು, ಬೆಳೆಗಾರರು ಲಾಭ ಇಲ್ಲವೆಂದು ಪರಿತಪಿಸುತ್ತಿದ್ದಾರೆ. ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ದರಗಳು ಸಗಟು ಬೆಲೆಯಲ್ಲಿ ಕಡಿಮೆಯಾದಷ್ಟು ಪ್ರಮಾಣದಲ್ಲಿ ಕಡಿಮೆಯಾಗದೇ ಗ್ರಾಹಕರಿಗೂ ಅನುಕೂಲವಾಗುತ್ತಿಲ್ಲ.
ಕಳೆದ ವಾರ ಕೆ.ಜಿಗೆ ₹ 20 ಇದ್ದ ಬೀನ್ಸ್ ಧಾರಣೆ, ಈ ವಾರ ಕೆ.ಜಿಗೆ ₹ 10ಕ್ಕೆ ಕುಸಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರವು ಕೆ.ಜಿಗೆ ₹ 25ಕ್ಕೂ ಹೆಚ್ಚಿದೆ. ಇದೇ ಅವಸ್ಥೆ ಬಹುತೇಕ ಎಲ್ಲ ತರಕಾರಿಗಳದ್ದಾಗಿದೆ.
ಸೋಮವಾರ ಒಂದೇ ದಿನ 1,737 ಕ್ವಿಂಟಲ್ನಷ್ಟು ಎಲೆಕೋಸು ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಂದಿತ್ತು. ಇದರಿಂದ ದರವು ಕೆ.ಜಿಗೆ ₹ 4ಕ್ಕೆ ಕುಸಿತ ಕಂಡಿತು. ಬದನೆಕಾಯಿ ದರ ಕೆ.ಜಿಗೆ ₹ 7ರಿಂದ ₹ 5ಕ್ಕೆ ಕಡಿಮೆಯಾಯಿತು. ಬಂದಿದ್ದ ಬಹುಪಾಲು ರೈತರು ಇದರಿಂದ ನಿರಾಶರಾದರು.
ಈ ಕುರಿತು ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಮಹದೇವಪ್ಪ, ‘ದರ ಕೇಳಿ ಗಿಡದಿಂದ ಎಲೆಕೋಸನ್ನು ಕೀಳುವುದೇ ಬೇಡ ಎನ್ನಿಸಿದೆ. ನಿಜಕ್ಕೂ ಕೂಲಿ ಹಾಗೂ ಸಾಗಾಣಿಕೆ ವೆಚ್ಚ ಸಿಗುತ್ತಿಲ್ಲ. ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ. ಏನು ಮಾಡುವುದೋ ಗೊತ್ತಾಗುತ್ತಿಲ್ಲ’ ಎಂದು ನಿಡುಸುಯ್ಯುತ್ತಾರೆ.
ಹಸಿಮೆಣಸಿನಕಾಯಿ ದರ ಕೆ.ಜಿಗೆ ₹ 10, ದಪ್ಪಮೆಣಸಿನಕಾಯಿ ದರ ₹ 12, ಟೊಮೆಟೊ ₹ 6 ಹೀಗೆ ಬಹುತೇಕ ಎಲ್ಲ ತರಕಾರಿಗಳ ಧಾರಣೆ ಇಳಿಕೆಗತಿಯಲ್ಲೇ ಮುಂದುವರಿದಿದೆ.
ಏಲಕ್ಕಿ ಬಾಳೆಹಣ್ಣಿನ ದರವು ಏರಿಳಿತದ ಸ್ಥಿತಿಯಲ್ಲಿದೆ. ಕುಸಿದಿದ್ದ ನೇಂದ್ರಬಾಳೆ ಅಲ್ಪ ಚೇತರಿಕೆ ಕಂಡಿದ್ದರೆ, ಏಲಕ್ಕಿ ಬಾಳೆಹಣ್ಣಿನ ದರ ಕೆ.ಜಿಗೆ ₹ 50ರ ಆಸುಪಾಸಿನಲ್ಲಿದೆ.
ಚೇತರಿಕೆ ಕಾಣದ ಮೊಟ್ಟೆದರ
ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಚೇತರಿಕೆ ಕಂಡಿಲ್ಲ. ಕಳೆದ ತಿಂಗಳ ಆರಂಭದಲ್ಲಿ ₹ 3.94 ಇದ್ದ ದರ ಈಗ ₹ 3.75 ಇದೆ. ಕಳೆದ ವರ್ಷ ಇದೇ ದಿನ ₹ 4.35 ದಾಖಲಾಗಿತ್ತು.
ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)