ಮೈಸೂರು: ಇಲ್ಲಿನ ಅರಮನೆಗೆ ಸೋಮವಾರ ಬಂದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಬಾಗಿಲಿನಲ್ಲೇ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ನೀಡುವ ಮೂಲಕ ಬರಮಾಡಿಕೊಂಡರು. ಅಪರೂಪದ ಈ ಕ್ಷಣವನ್ನು ಹಲವು ಪ್ರವಾಸಿಗರು ಸಂಭ್ರಮಿಸಿದರು.
ಮೈಸೂರು ಟ್ರಾವೆಲ್ ಅಸೋಸಿಯೇಷನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘವು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆಯ ವರಹಾ ದ್ವಾರದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿತ್ತು. ಅರಮನೆಗೆ ಬಂದವರಿಗೆ ಹೂ ನೀಡಿ ಸ್ವಾಗತಿಸಿದ್ದು ಮಾತ್ರವಲ್ಲ, ಸಿಹಿಯನ್ನೂ ಹಂಚಲಾಯಿತು.
ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಸಿಂಹಾಸನವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಬೇಕೋ ಬೇಡವೊ, ಅರಮನೆಯಲ್ಲಿ ಜಟ್ಟಿ ಕಾಳಗ ನಡೆಸಬೇಕೋ ಬೇಡವೊ ಎಂಬ ವಿಚಾರವನ್ನು ಅರಮನೆ ಕಚೇರಿ ಮಾಹಿತಿ ನೀಡಲಿದೆ’ ಎಂದರು.
ಹೋಟೆಲ್ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರತಿಕ್ರಿಯಿಸಿ, ‘ಕೆಲದಿನಗಳಿಂದ ಪ್ರವಾಸಿಗರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೋಟೆಲ್ ಉದ್ಯಮ ಚೇತರಿಕೆಗೆ ಇನ್ನಷ್ಟು ಕಾಲ ಬೇಕು’ ಎಂದು ಹೇಳಿದರು.
ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್ ಮಾತನಾಡಿ, ‘ಬಹಳಷ್ಟು ಮಂದಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದಾರೆ. ಹೀಗಾಗಿ, ಜಂಬೂಸವಾರಿ ಬನ್ನಿಮಂಟಪದವರೆಗೂ ಹೋಗಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಇದ್ದರು.