ತಿ.ನರಸೀಪುರ: ಮೈಸೂರಿನಿಂದ ಪಟ್ಟಣ ಮಾರ್ಗವಾಗಿ ಕೊಳ್ಳೇಗಾಲ, ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಎದುರಾಗುವ ಇಕ್ಕಟ್ಟಿನ ತಿರುವುಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಪಿಂಜರಾಪೋಲ್ ಬಳಿ ಸೋಮವಾರ ನಡೆದ ಭೀಕರ ಅಪಘಾತ ಇದಕ್ಕೆ ಸಾಕ್ಷಿಯಾಗಿದೆ.
ಆಲಗೂಡಿನ ದಮ್ಮಯ್ಯನ ಬೋರೆ, ಕುರುಬೂರಿನ ಪಿಂಜರಾಪೋಲ್ ಬಳಿಯ ತಿರುವು, ಮಾಡ್ರಹಳ್ಳಿಯ ಮುಂದಿನ ತಿರುವು ಹಾಗೂ ಮೂಗೂರು ಜಂಕ್ಷನ್ ಬಳಿ ಅಪಘಾತ ಸಾಮಾನ್ಯ ಎಂಬಂತಾಗಿದೆ.
‘ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಬೆಳೆದ ಪೊದೆಗಳ ತೆರವು ನಿಯಮಿತವಾಗಿ ನಡೆಯುತ್ತಿಲ್ಲ. ಹೀಗಾಗಿ ರಸ್ತೆಯಲ್ಲಿ ಎದುರು ಬರುವ ವಾಹನಗಳು ಇನ್ನೊಂದು ಬದಿಯ ವಾಹನಗಳ ಚಾಲಕರಿಗೆ ಸರಿಯಾಗಿ ಕಾಣುವುದೇ ಇಲ್ಲ. ಅದರೊಂದಿಗೆ, ತಿರುವಿನಲ್ಲಿ ವೇಗ ನಿಯಂತ್ರಣ ಮಾಡಲಾಗದೇ ಅಪಘಾತಗಳಾಗುತ್ತಿವೆ’ ಎಂಬುದು ಸ್ಥಳೀಯರ ಆರೋಪ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಂಡ ನಂತರ ನೆರೆಯ ಕೇರಳ, ತಮಿಳುನಾಡಿನ ವಾಹನಗಳು ಹೆಚ್ಚು ಸಂಚರಿಸುತ್ತಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಇರುವ ರಸ್ತೆ ಸಾಲದಾಗಿದೆ. ಕಿರಿದಾದ ರಸ್ತೆ ಕೂಡ ಅಪಘಾತಗಳಿಗೆ ಕಾರಣವಾಗಿದೆ.
ಹೆದ್ದಾರಿಯ ತಿರುವುಗಳಲ್ಲಿ ರಸ್ತೆ ಸಮತಟ್ಟಾಗಿರದೇ ಒಂದು ಬದಿ ಎತ್ತರ ಮತ್ತೊಂದು ಬದಿ ಇಳಿಜಾರಿನಂತಿರುವುದು ಕೂಡ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಲು ಕಾರಣ. ಹಲವು ಬಾರಿ ದ್ವಿಚಕ್ರ ವಾಹನ ಸವಾರರೂ ಅಪಘಾತಗಳಿಗೀಡಾಗಿದ್ದಾರೆ. ರಾತ್ರಿ ವೇಳೆ ಗಿಡ ಗಂಟಿಗಳು ಸರಿಯಾಗಿ ಕಾಣದೇ ವಾಹನಗಳ ಬೆಳಕು ಸರಿಯಾಗಿ ಕಾಣದೇ ಕೂಡ ಅಪಘಾತಗಳಾಗಿವೆ ಎಂಬುದು ಸ್ಥಳೀಯರ ಪ್ರತಿಪಾದನೆ.
'ಹೆದ್ದಾರಿಯಲ್ಲಿ ಸೂಚನಾ ಫಲಕಗಳಿಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಬೇಕು. ರಸ್ತೆ ವಿಸ್ತರಣೆಯ ಜತೆಗೆ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಸೂಚನಾ ಫಲಕಗಳನ್ನು ಅಳವಡಿಸಬೇಕು" ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.