ತಿ.ನರಸೀಪುರ: ‘ಪೋಷಕರು ಹಾಗೂ ಖಾಸಗಿ ಶಾಲೆಗಳ ನಡುವಿನ ಶುಲ್ಕ ವಿಷಯಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅರಿತು ಎರಡು ಕಡೆಯಿಂದ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಸೋಮವಾರ ಸಂಜೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ತಮ್ಮ ಮಕ್ಕಳು ಓದುವ ಶಾಲೆಯ ವಿರುದ್ಧ ಧಿಕ್ಕಾರ ಕೂಗುವುದು ಹಾಗೂ ಶಿಕ್ಷಣ ನೀಡುವ ಶಾಲೆಗಳು ಶುಲ್ಕದ ವಿಷಯದಲ್ಲಿ ಪ್ರತಿಷ್ಠೆಗೆ ಬೀಳುವುದು ಉಚಿತವಲ್ಲ. ಕೋವಿಡ್ ಇರುವುದು ಸ್ವಲ್ಪ ಕಾಲ ಮಾತ್ರ. ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆ ಮತ್ತು ಪೋಷಕರು ನಿರಂತರವಾಗಿರಬೇಕು. ಶುಲ್ಕ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂದಿದ್ದೆವು. ಆದರೆ, ಇಲಾಖೆಯ ಆಯುಕ್ತರ ಸಮ್ಮುಖದಲ್ಲಿ ಎರಡು ಕಡೆ ಅಭಿಪ್ರಾಯ ಪಡೆದು ಶೇ 30ರಷ್ಟು ವಿನಾಯಿತಿ ನೀಡುವಂತೆ ತಿಳಿಸಲಾಗಿದೆ. ಪೋಷಕರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಶಾಲೆಗಳಿಗೆ ನಿರ್ವಹಣೆಯ ಸಮಸ್ಯೆ ಎನ್ನಲಾಗುತ್ತಿದೆ. ಈ ವಿಷಯದಲ್ಲಿ ಪರಿಸ್ಥಿತಿಯನ್ನು ಅರಿತು ಎರಡು ಕಡೆಯಿಂದಲೂ ಪರಸ್ಪರ ಒಮ್ಮತದ ನಿರ್ಣಯ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಾಸಕ ಎಂ. ಅಶ್ವಿನ್ ಕುಮಾರ್, ಮಾಜಿ ಶಾಸಕ ಸಿ.ರಮೇಶ್, ಡಿಡಿಪಿಐ ಪಾಂಡುರಂಗ, ಬಿಇಒ ಮರಿಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.