ಮೈಸೂರು: ‘12ನೇ ಶತಮಾನದಲ್ಲಿ ಅತ್ಯಂತ ಘೋರ ಘಟನೆಗಳು ನಡೆದಿದ್ದು, ದೊಡ್ಡ ಅನ್ಯಾಯವಾಗಿದೆ. ಶರಣ ಹತ್ಯಾಕಾಂಡವಾಗಿದೆ. ಅದನ್ನು ಇಂದಿನ ಲಿಂಗಾಯತರು ಕಲ್ಯಾಣ ಕ್ರಾಂತಿ ಎಂದು ಭಾವಿಸಿದ್ದಾರೆ. ಅದು ಕ್ರಾಂತಿಯಲ್ಲ, ಹತ್ಯಾಕಾಂಡ’ ಎಂದು ಪತ್ರಕರ್ತ ರಂಜಾನ್ ದರ್ಗಾ ಹೇಳಿದರು.
ಕಲಾಮಂದಿರದ ಕಿರು ರಂಗಮಂದಿರದಲ್ಲಿ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ನಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಆರ್.ಶಿವಕುಮಾರ್ ಅವರ ‘ವಚನ: ವರ್ತಮಾನದ ಅನುಸಂಧಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಶರಣರನ್ನು ಸಾಯಿಸಿದ್ದನ್ನು, ವಚನಗಳನ್ನು ಸುಟ್ಟಿದ್ದನ್ನು ಕ್ರಾಂತಿ ಎನ್ನುತ್ತೀರಾ? ಹೀಗೆನ್ನುವವರೆಲ್ಲಾ ಯಾವ ಲಿಂಗಾಯತರು?’ ಎಂದು ಬೇಸರದಿಂದ ಕೇಳಿದರು.
‘ತಮ್ಮ ಪೂರ್ವಜರ ತ್ಯಾಗದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ಸಮಾಜವಿದ್ದರೆ ಅದು ಲಿಂಗಾಯತ ಸಮುದಾಯ’ ಎಂದು ವಿಶ್ಲೇಷಿಸಿದರು.
‘ಬಸವಣ್ಣ ಮತ್ತು ಶರಣರ ವಚನಗಳು ಹಾಡಲಿಕ್ಕೆ-ಕುಣಿಯಲಿಕ್ಕೆ ಬೇಕಾಗಿದೆ, ಮಠ ಕಟ್ಟಲು ಬೇಕಾಗಿದೆ. ಮಠ, ಗುಡಿ, ಸ್ವಾಮಿ, ಕಾವಿ ಬಟ್ಟೆ ಇಲ್ಲದ ಧರ್ಮ ಲಿಂಗಾಯತ. ಈ ಪರಿಕಲ್ಪನೆಯನ್ನು ಕಾಲಿಗೆ ಹಾಕಿದ ಲಿಂಗಾಯತ ವಿದ್ವಾಸಂಸರಿಗೆ ದೀರ್ಘ ದಂಡ ನಮಸ್ಕಾರ’ ಎಂದು ಹೇಳಿದರು.
‘ಲಿಂಗಾಯತವನ್ನು ಜಾತಿ ಮಾಡಿಕೊಂಡು, ಅಸ್ಪೃಶ್ಯತೆ ಆಚರಿಸಿ, ನೂರೆಂಟು ಒಳ ಜಾತಿಗಳನ್ನು ಮಾಡಿಕೊಳ್ಳಲಾಗಿದೆ. ಇದು ಲಿಂಗಾಯತ ಧರ್ಮವೇ’ ಎಂದು ಪ್ರಶ್ನಿಸಿದರು. ‘ಎಲ್ಲಿಯವರೆಗೆ ಗುಲಾಮಗಿರಿ ಹೋಗುವುದಿಲ್ಲವೋ ಅಲ್ಲಿವರೆಗೆ ಲಿಂಗಾಯತ ಧರ್ಮ ಬೆಳೆಯುವುದಿಲ್ಲ’ ಎಂದು ತಿಳಿಸಿದರು.
ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಸ್.ಬಿ.ತೇಜ ಕೃತಿ ಪರಿಚಯಿಸಿದರು.
ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು, ಲೇಖಕ ಆರ್.ಶಿವಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ನ ಆರ್.ಪ್ರಹ್ಲಾದ, ಮಂಡ್ಯದ ಭವಾನಿ ಲೋಕೇಶ್ ಇದ್ದರು.