ಮೈಸೂರು: ‘ಸಂವಿಧಾನ ಹಾಗೂ ದಲಿತ ವಿರೋಧಿ ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯಲು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದೆ’ ಎಂದು ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಹಿಂದ ವರ್ಗಕ್ಕೆ ಸಂವಿಧಾನದಿಂದ ದೊರಕಿದ್ದ ಹಕ್ಕು ಮತ್ತು ಸೌಲಭ್ಯಗಳಿಗೆ ಕುತ್ತು ಬಂದಿದೆ. ಆರ್ಎಸ್ಎಸ್ ಸಿದ್ಧಾಂತವನ್ನು ಜಾರಿ ಮಾಡುವುದಷ್ಟೇ ಅವರ ಕೆಲಸವಾಗಿದೆ’ ಎಂದು ಕಿಡಿ ಕಾರಿದರು.
‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚುನಾವಣಾ ಬಾಂಡ್ಗಳ ಮೂಲಕ ಕೈಗಾರಿಕೋದ್ಯಮಿಗಳಿಂದ ಸಾವಿರಾರು ಕೋಟಿ ಲಂಚ ಪಡೆದು ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿವೆ. ಕೇವಲ ದೇವರು, ಧರ್ಮ ಎಂದು ಭಾವನಾತ್ಮಕ ವಿಚಾರಗಳಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಬಂಗವಾದಿ ನಾರಾಯಣಪ್ಪ, ಹೊರಳವಾಡಿ ನಂಜುಂಡಸ್ವಾಮಿ ಸತೀಶ್, ಟಿ.ಈರಯ್ಯ ತಾತನಹಳ್ಳಿ ಇದ್ದರು.