ಮೈಸೂರು: ‘ದೇಶದ ಸಾಂಸ್ಕೃತಿಕ ಕಲೆಗಳಲ್ಲಿ ಕಾವ್ಯ ಮತ್ತು ಗಾಯನವನ್ನು ಒಳಗೊಂಡ ಗಮಕ ಕಲೆಗೆ ವಿಶೇಷ ಸ್ಥಾನಮಾನವಿದ್ದು, ಈ ಕ್ಷೇತ್ರದಲ್ಲಿ ಕೃಷ್ಣಗಿರಿ ರಾಮಚಂದ್ರ ಅವರ ಸಾಧನೆ ಗಣನೀಯ’ ಎಂದು ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್ ಹೇಳಿದರು.
ಮೈಸೂರಿನ ಪರಂಪರೆ ಸಂಸ್ಥೆ ವತಿಯಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರದಿಂದ ಕುಮಾರವ್ಯಾಸ ಪ್ರಶಸ್ತಿಗೆ ಭಾಜನರಾದ ಗಮಕ ವಾಚಕ ಹಾಗೂ ವ್ಯಾಖ್ಯಾನಕಾರ ಕೃ.ರಾಮಚಂದ್ರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಮೈಸೂರಿನಲ್ಲಿ ಗಮಕ ಕಲೆಯನ್ನು ದೇಶದಾದ್ಯಂತ ಪಸರಿಸಿದ ಕೀರ್ತಿ ಕೃಷ್ಣಗಿರಿ ಕೃಷ್ಣರಾಯರಿಗೆ ಸಲ್ಲುತ್ತದೆ. ಅವರ ಪುತ್ರರಾಗಿ ರಾಮಚಂದ್ರ ಅವರು ಕೂಡ ಕಲೆಯನ್ನು ಉಳಿಸುವ ಕೈಂಕರ್ಯ ಮಾಡಿದ್ದಾರೆ. ಅವರ ಸಾಂಸ್ಕೃತಿಕ ಕಲಾ ಸೇವೆಗೆ ಕುಮಾರವ್ಯಾಸ ಪ್ರಶಸ್ತಿ ಸಂದಿರುವುದು ಅಭಿನಂದನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕನ್ನಡ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರು ಕೃ.ರಾಮಚಂದ್ರ ಅವರೊಂದಿಗೆ ಪತ್ನಿ ವಿದುಷಿ ತುಳಸಿ ರಾಮಚಂದ್ರ ಅವರನ್ನು ಸನ್ಮಾನಿಸಿದರು. ಪರಂಪರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.