ಮೈಸೂರು: ಮಾನವ ಕುಲದ ಒಳಿತಿಗಾಗಿ ಜಗತ್ತಿನ ಎಲ್ಲ ಧರ್ಮಗಳೂ ಪರಸ್ಪರ ಐಕ್ಯತೆ ಕಾಪಾಡಿಕೊಳ್ಳದಿದ್ದರೆ ಜಗತ್ತು ನಾಶವಾಗುವುದು ಖಚಿತ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಶಿವರಾಜಪ್ಪ ಹೇಳಿದರು.
ನಗರದಲ್ಲಿ ಶನಿವಾರ ಜಮಾತೆ ಇಸ್ಲಾಮಿ ಹಿಂದ್ ಮೈಸೂರು ವಿಭಾಗದಿಂದ ಏರ್ಪಡಿಸಿದ್ದ ರಂಜಾನ್ ಇಫ್ತಾರ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು. ರಾಜಕಾರಣಿಗಳ ಧರ್ಮ ರಾಜಕಾರಣಕ್ಕೆ ಬಲಿಯಾಗದೇ ನಾವೆಲ್ಲ ಜಾಗೃತರಾಗಬೇಕಿದೆ ಎಂದರು.
ಕರ್ನಾಟಕ ಜಮಾತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ರಿಯಾಜ್ ಅಹಮ್ಮದ್ ರೋಣ ಮಾತನಾಡಿ, ‘ನಾವುಗಳೆಲ್ಲರೂ ಪರಸ್ಪರ ಅನುಸರಿಸುತ್ತಿರುವ ಧರ್ಮಗಳ ಸಂದೇಶಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಿದೆ. ಜತೆಗೆ ನಮ್ಮ ಧರ್ಮಗಳ ಬಗ್ಗೆ ಪರಸ್ಪರ ಆರೋಗ್ಯಪೂರ್ಣ ಸಂವಾದಗಳನ್ನು ಏರ್ಪಡಿಸಬೇಕಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಸೌಹಾರ್ದಯುತ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಆಶಿಸಿದರು.
ಜಮಾತೇ ಇಸ್ಲಾಮಿ ಹಿಂದ್ ಮೈಸೂರು ವಿಭಾಗದ ಅಧ್ಯಕ್ಷ ಮಹಮ್ಮದ್ ಅಸ್ಲಂ, ಝಬಿಯುಲ್ಲಾ, ಅಬ್ದುಲ್ ಘಫಾರ್ ಬೇಗ್, ಅಸಾದುಲ್ಲಾ ಪಾಲ್ಗೊಂಡರು.