ಹುಣಸೂರು: ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 3 ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು 35 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಗ್ರಾಮದ ನಿವಾಸಿ ಅಲ್ತಾಫ್ ಮತ್ತು ಶಾಬುದ್ದೀನ್ ಅವರು ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಪಡೆದ ಸರ್ಕಲ್ ಇನ್ನ್ಸ್ಪೆಕ್ಟರ್ ಸಂತೋಷ್ ಕಾಶ್ಯಪ್ ಮತ್ತು ತಂಡ ಡಿ.ವೈ.ಎಸ್.ಪಿ. ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು.
ಹಾಲಿನ ವಾಹನ ಬಳಕೆ: ಜಾನುವಾರುಗಳ ಅಕ್ರಮ ಸಾಗಾಣಿಕೆಗೆ ಆರೋಪಿಗಳು ನಿತ್ಯ ಹಾಲು ಸಾಗಿಸುವ ವಾಹನವನ್ನು ಬಳಸಿದ್ದರು. ಈ ಮೂಲಕ ಸಾರ್ವಜನಿಕರಿಗೆ ಅನುಮಾನ ಬಾರದಂತೆ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ವಶಪಡಿಸಿಕೊಂಡ ಜಾನುವಾರುಗಳನ್ನು ಮೈಸೂರಿನ ಪಿಂಜರಾಪೋಲ್ಗೆ ಕಳುಹಿಸಲಾಗಿದೆ.
ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಎಸ್.ಪಿ.ನಂದಿನಿ ಭೇಟಿ ನೀಡಿ ಸಭೆ ನಡೆಸಿದರು. ಕಾರ್ಯಾಚರಣೆಯಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಷೆ ಪಿಎಸ್ಐ ರಾಮಚಂದ್ರ ನಾಯಕ್, ಅಚ್ಯುತನ್ ಭಾಗವಹಿಸಿದ್ದರು.