ಮೈಸೂರು: ‘ಹಿಂದೂ ಧರ್ಮದ ಕುರಿತಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿ ಸತೀಶ ವಿರುದ್ಧ ಘೋಷಣೆ ಕೂಗಿದರು. ‘ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು, ಜನರ ಭಾವನೆಗಳಿಗೆ ಬೇಸರ ಮೂಡಿಸಿದೆ. ಆ ಶಾಸಕರ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಧರ್ಮದ ವಿರುದ್ಧ ಹೇಳಿಕೆ ಕೊಟ್ಟು, ಮತ ಪಡೆಯುವ ಕೆಲಸ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಜಾರಕಿಹೊಳಿ ಶಾಲೆಯಲ್ಲಿ ಮತ್ತು ಇತರ ದಾಖಲೆಗಳಲ್ಲಿ ಯಾವ ಧರ್ಮವೆಂದು ನಮೂದಿಸಿದ್ದಾರೆ ಎಂದು ಸ್ಪಷ್ಟಪಡಿಸಲಿ’ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಹಿಂದೂ ನೆಲದಲ್ಲಿದ್ದು, ಸಹೋದರರಂತೆ ಬಾಳುತ್ತಿರುವ ಸನ್ನಿವೇಶದಲ್ಲಿ ಅರೆಬರೆ ತಿಳಿವಳಿಕೆಯಿಂದ ಅಜ್ಞಾನಿ ಸತೀಶ ಹಿಂದೂ ಧರ್ಮದ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ಮಾತ್ರ ಅಲ್ಲ ಪ್ರತಿ ಹಿಂದು ಕೂಡ ಖಂಡಿಸುತ್ತಿದ್ದಾರೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ವಕ್ತಾರ ಮಹೇಶ್, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ನಿಗಮ ಮಂಡಳಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ಗೌಡ, ಎಂ.ಶಿವಕುಮಾರ್, ರಘು ಕೌಟಿಲ್ಯ, ಮುಖಂಡರಾದ ಗಿರಿಧರ್, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಸೋಮಶೇಖರ್ ಇದ್ದರು.