ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಸೆ.26ರಂದು ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅದಿವಾಸಿಗಳಿಂದಲೇ ಉಡಿ ತುಂಬಿಸಿ ಗೌರವಿಸಬೇಕು’ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಒತ್ರ ಬರೆದು ಮನವಿ ಮಾಡಿದ್ದಾರೆ.
‘ದ್ರೌಪದಿ ಅವರನ್ನು ಕಂಡು ಅಭಿನಂದಿಸಲು ನಮ್ಮ ಜಿಲ್ಲೆಯ ಆದಿವಾಸಿ ಯುವಕ–ಯುವತಿಯರು ಆಶಿಸಿದ್ದಾರೆ. ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದೇನೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯು, ರಾಷ್ಟ್ರಪತಿ ಕಚೇರಿ ಸಂಪರ್ಕಿಸಿ ಅನುಮತಿ ಪಡೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ’ ಎಂದಿದ್ದಾರೆ.
‘ಜಿಲ್ಲೆಯ ಪರವಾಗಿ ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ, ಮೈಸೂರು ಚಿಗುರು ವೀಳ್ಯದೆಲೆ, ಅಡಿಕೆ, ಮೈಸೂರು ಪಾಕ್, ಶ್ರೀಗಂದ, ಕೊಡಗಿನ ಕಾಫಿ, ಕಾಳುಮೆಣಸು, ಏಲಕ್ಕಿ ಹಾಗೂ ನಮ್ಮ ಆದಿವಾಸಿಗಳೇ ಸಂಗ್ರಹಿಸುವ ಜೇನು ಮೊದಲಾದವುಗಳನ್ನು ಸೇರಿಸಿ ಉಡಿ ತುಂಬಬೇಕು’ ಎಂದು ವಿಶ್ವನಾಥ್ ಕೋರಿದ್ದಾರೆ.