ಮೈಸೂರು: ಮೈಸೂರು ಜಿಲ್ಲೆಯ ಬನ್ನೂರು ಬಳಿಯ ತುರಗನೂರಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕಿ ವಿದ್ಯಾ ಅವರನ್ನು ಆಕೆಯ ಪತಿ ನಂದೀಶ್ ಸೋಮವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.
'ನಗರದ ಶ್ರೀರಾಂಪುರ ನಿವಾಸಿ ವಿದ್ಯಾ ಅವರು ತಡರಾತ್ರಿ ತುರಗನೂರಿನಲ್ಲಿರುವ ಗಂಡನ ಮನೆಗೆ ತೆರಳಿದ್ದು, ಇಬ್ಬರ ನಡುವೆ ಜಗಳವಾಗಿತ್ತು. ಜಗಳದ ನಡುವೆ ನಂದೀಶ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದರು. ತಲೆಗೆ ಬಲವಾದ ಗಾಯಗಳಾಗಿದ್ದರಿಂದ ವಿದ್ಯಾ ಮೃತಪಟ್ಟರು' ಎಂದು ಪೊಲೀಸರು ತಿಳಿಸಿದ್ದಾರೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾ ಅವರು ಮೈಸೂರು ನಗರ ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಸಕ್ರಿಯವಾಗಿದ್ದರು. ಈ ಹಿಂದೆ ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಲನಚಿತ್ರಗಳಲ್ಲೂ ಸಹನಟಿಯಾಗಿ ಕಾಣಿಸಿಕೊಂಡಿದ್ದರು.