ಮೈಸೂರು: ಎಚ್.ಡಿ. ಕೋಟೆಯ ಅನಿಲ್ ಚಿಕ್ಕಮಾದು ಅವರನ್ನು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ಆರ್) ಅಧ್ಯಕ್ಷ ಸ್ಥಾನಕ್ಕೆ ನೇಮಿಸುವುದ ರೊಂದಿಗೆ, ಜಿಲ್ಲೆಯ ಎಂಟು ಕಾಂಗ್ರೆಸ್ ಶಾಸಕರಲ್ಲಿ ನಾಲ್ವರಿಗೆ ಅಧಿಕಾರ ದೊರೆತಂತಾಗಿದೆ.
ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಎಂಟರಲ್ಲಿ ಕಾಂಗ್ರೆಸ್ ಗೆದ್ದಿದೆ. ವರುಣ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಗಾದಿ ದೊರೆತಿದ್ದರೆ, ತಿ.ನರಸೀಪುರ ಪ್ರತಿನಿಧಿಸುವ ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ ಸ್ಥಾನ ಸಿಕ್ಕಿದೆ. ಪಿರಿಯಾಪಟ್ಟಣದ ಕೆ.ವೆಂಕಟೇಶ್ ಅವರು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಗಾದಿ ಗಳಿಸಿದ್ದಾರೆ. ಇದೀಗ, ಅನಿಲ್ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಅಧಿಕಾರ ಪಡೆದಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲು ಕ್ಷೇತ್ರವಾದ ಎಚ್.ಡಿ.ಕೋಟೆ ಯಲ್ಲಿ 2ನೇ ಬಾರಿಗೆ ಗೆದ್ದಿರುವ ಅವರಿಗೆ ಪಕ್ಷ ಮಣೆ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ, ‘ವನಸಿರಿ’ಯ ನಾಡನ್ನು ಪ್ರತಿನಿಧಿಸುವ ಅವರಿಗೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷಗಿರಿ ದೊರೆತಿದೆ. ನಿರೀಕ್ಷೆಯಂತೆ ಅವರಿಗೆ ಸ್ಥಾನ ಸಿಕ್ಕಿದೆ.
ಹಿರಿಯ ಶಾಸಕ ತನ್ವೀರ್ ಸೇಠ್ (ನರಸಿಂಹರಾಜ) ಅವರಿಗೆ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಉಳಿದ ಕಾಂಗ್ರೆಸ್ ಶಾಸಕರಾದ ದರ್ಶನ್ ಧ್ರುವನಾರಾಯಣ (ನಂಜನಗೂಡು), ಕೆ.ಆರ್.ನಗರ (ಡಿ.ರವಿಶಂಕರ್) ಹಾಗೂ ಕೆ.ಹರೀಶ್ ಗೌಡ (ಚಾಮರಾಜ) ಇದೇ ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದಾರೆ.
‘ಜೆಎಲ್ಆರ್ ಮತ್ತಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸು ವಂತೆ ಮಾಡಲು ಕ್ರಮ ವಹಿಸುವೆ. ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಸೌಲಭ್ಯಕ್ಕೆ ಒತ್ತು ನೀಡಲಾಗುವುದು. ನಿಗಮವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವನ್ನಾಗಿ ಮಾಡಲು ಶ್ರಮಿಸುತ್ತೇನೆ’ ಎಂದು ಅನಿಲ್ ಪ್ರತಿಕ್ರಿಯಿಸಿದರು.