ಮೈಸೂರು: ‘ಡ್ರೋನ್, ಡಿಜಿಟಲ್ ತಂತ್ರಜ್ಞಾನವನ್ನು ಕೃಷಿಗೆ ನೀಡುವ ಬಗ್ಗೆಸರ್ಕಾರಗಳು ದೊಡ್ಡ ದೊಡ್ಡ ಮಾತನಾಡುತ್ತವೆ. ಡ್ರೋನ್ ನಿಮ್ಮ ತಲೆ ಮೇಲೆ ಇಟ್ಟುಕೊಳ್ಳಿ.ದಿನದ ಹವಾಮಾನ ಮುನ್ಸೂಚನೆಯನ್ನು ಮೊದಲು ನೀಡುವ ವ್ಯವಸ್ಥೆ ಮಾಡಿ’
ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ‘ಕಿಸಾನ್ ಸ್ವರಾಜ್ ಸಮ್ಮೇಳನ’ದ ಸಮಾರೋಪದಲ್ಲಿ ‘ಆಶಾ’ ಒಕ್ಕೂಟ ಸಂಘಟಕ ಶ್ರೀಧರ್ ರಾಧಾಕೃಷ್ಣನ್ ಸರ್ಕಾರಗಳ ವಿರುದ್ಧ ಮೇಲಿನಂತೆ ವಾಗ್ದಾಳಿ ನಡೆಸಿದರು.
‘ದುಬಾರಿ ಡ್ರೋನ್, ಡಿಜಿಟಲ್ ತಂತ್ರಜ್ಞಾನಗಳು ಕೃಷಿಕರ ಸಮಸ್ಯೆ ಪರಿಹರಿಸಿದ ಉದಾಹರಣೆ ನೀಡಿ. ಸರ್ಕಾರದಬಣ್ಣದ ಮಾತುಗಳು ಕೃಷಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಉದ್ಯಮಿಗಳ ಆದಾಯ ದುಪ್ಪಟ್ಟು ಮಾಡುತ್ತಿವೆ’ ಎಂದರು.
‘ವಯನಾಡ್ನ 25 ಕಿ.ಮೀ ವ್ಯಾಪ್ತಿಯಲ್ಲಿ ಹವಾಮಾನ ಮುನ್ಸೂಚನೆ ವರದಿಯನ್ನು ನೀಡುವ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಹವಾಮಾನ ವೈಪರೀತ್ಯ ವಾಸ್ತವವಾಗಿದೆ.ಮಾನವ ಪ್ರಾಣಿ– ಸಂಘರ್ಷಕ್ಕೂ ಕಾರಣವಾಗಿದೆ. ಪ್ರಕೃತಿಯು ವಿಕೋಪಗಳ ಮೂಲಕ ಕಪಾಳಕ್ಕೆ ಹೊಡೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.
‘ರಾಸಾಯನಿಕ ಬಳಸಿ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡಿದ್ದೇವೆ. ಜೀವ ವೈವಿಧ್ಯವೇ ನಾಶವಾಗುತ್ತಿದೆ. ಸಾವಯವ ಕೃಷಿಕರು ಭೂಮಿಯ ಆರೋಗ್ಯವನ್ನಷ್ಟೇ ಕಾಪಾಡುತ್ತಿಲ್ಲ, ಜನರ ಆರೋಗ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.
ಉಷಾ ಸೂಲಪಾಣಿ ಮಾತನಾಡಿ, ‘ಮುಂದುವರಿದ ರಾಜ್ಯವಾಗಿದ್ದ ಕೇರಳ ಪ್ರವಾಹ, ಭೂ ಕುಸಿತದಿಂದ ಹಿನ್ನಡೆ ಅನುಭವಿಸಿತು. ಆಂಧ್ರ ಪ್ರದೇಶದ ಪರಿಸರಾಧರಿತ ಕೃಷಿಯನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು. ಹಿಮಾಚಲ ಪ್ರದೇಶ ಸಹಜ ಕೃಷಿ, ಛತ್ತೀಸ್ಗಡದ ಜಾನುವಾರು ಕೇಂದ್ರಿತ ಕೃಷಿ ಮಾದರಿಗಳಾಗಬೇಕು’ ಎಂದರು.
ಚೆನ್ನೈನ ಸಾವಯವ ಕೃಷಿ ಸಂಘಟಕ ಕಾರ್ತಿಕ್ ಗುಣಶೇಖರ್ ಮಾತನಾಡಿ, ‘ಆಹಾರ, ನೀರು, ಉಸಿರು ಎಲ್ಲವೂ ವಿಷವಾಗಿದೆ.ನಮ್ಮ ತಂದೆಯವರು ಅವರ ಯೌವನದಲ್ಲಿ 3 ಪ್ರಾಕೃತಿಕ ವಿಕೋಪ ನೋಡಿದ್ದರು. ನನ್ನ 28 ವರ್ಷದ ಜೀವನದಲ್ಲಿ 15 ವಿಕೋಪ ನೋಡಿದ್ದೇನೆ. ಜಾಗತಿಕ ತಾಪಾಮಾನ ಏರಿಕೆಯ ಬಿಸಿ ಕಣ್ಣ ಮುಂದೆಯೇ ಇದೆ’ ಎಂದರು.
ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಕೆಎಸ್ಒಯು ಕುಲಸಚಿವ ಖಾದರ್ ಪಾಷಾ ಇದ್ದರು.