ತಲಕಾಡು: ಗಂಗರ ರಾಜಧಾನಿ ತಲಕಾಡಿನಲ್ಲಿ ಬಯಲುಶೌಚ ವ್ಯಾಪಕವಾಗಿದ್ದು, ಪುರುಷರು ಮತ್ತು ಮಹಿಳೆಯರು ಪ್ರತಿನಿತ್ಯ ರಸ್ತೆ ಬದಿ ಹಾಗೂ ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗುವುದು ಸಾಮಾನ್ಯವಾಗಿದೆ.
ತಲಕಾಡು ಗ್ರಾಮ ಪಂಚಾಯಿತಿ ವತಿಯಿಂದ ಶೇ 90ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಶೌಚಾಲಯದ ಬಳಕೆ ತೀರಾ ಕಡಿಮೆ. ಶೇ 45ರಷ್ಟು ಜನರು ಈಗಲೂ ಬಯಲು ಶೌಚಕ್ಕೆ ಅಂಟಿಕೊಂಡಿದ್ದಾರೆ.
ಬೆಳಿಗ್ಗೆ, ಸಂಜೆ ಗ್ರಾಮದ ನವಗ್ರಹ ದೇವಸ್ಥಾನದಿಂದ ಹತ್ತಿ ಮಾರನ ಗುಡ್ಡದವರೆಗೂ, ಅಗಸರ ಕಡಿ ಹತ್ತಿರ, ಕಾವೇರಿಪುರ ರಸ್ತೆ ಬದಿಯ ಮುಳ್ಳಿನ ಪೊದೆಗಳು, ಗ್ರಾಮದ ಹೊರವಲಯದ ರಸ್ತೆಗಳು ಮಲವಿಸರ್ಜನೆಯ ಸ್ಥಳಗಳಾಗಿ ಮಾರ್ಪಟ್ಟಿವೆ.
ನಿಸರ್ಗಧಾಮಕ್ಕೆ ಹೋಗುವ ಬೈಪಾಸ್, ಹಳೇಬೀಡು ರಸ್ತೆ, ಹೆರಿಗೆ ಆಸ್ಪತ್ರೆ, ಗ್ರಾಮದ ಮುಳ್ಳಿನ ಪೊದೆಗಳಲ್ಲಿ ಶೌಚ ಮಾಡುತ್ತಾರೆ.
ಬಯಲು ಶೌಚ ಮಾಡದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಮನೆಗಳಲ್ಲಿ ನಿರ್ಮಿಸಿರುವ ಶೌಚಾಲಯಗಳು ನಿರುಪಯೋಗಿ ವಸ್ತುಗಳನ್ನು ಶೇಖರಿಸುವ ಸ್ಥಳಗಳಾಗಿ ಮಾರ್ಪಟ್ಟಿವೆ.
ರಸ್ತೆ, ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗುವುದರಿಂದ ರೈತ ಮಹಿಳೆಯರು, ರೈತರು ಕೂಲಿಕಾರ್ಮಿಕರು ತಮ್ಮ ಜಮೀನಿಗೆ ತೆರಳಲು ಮುಜುಗರ ಪಡುವಂತಹ ಸ್ಥಿತಿ ಇದೆ.
ಗ್ರಾಮದಲ್ಲಿ ಬಯಲು ಶೌಚ ವ್ಯಾಪಕವಾಗಿದೆ. ಸರ್ಕಾರದ ವತಿಯಿಂದ ಶೇ 90ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳನ್ನು ಬಳಸಲು ಜನ ಹಿಂದೆ ಬಿದ್ದಿದ್ದಾರೆ. ಅವರಿಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುವುದು ಎಂದು ಪಿಡಿಒ ಧರಣೇಶ್ ತಿಳಿಸಿದರು.
ಶೌಚಾಲಯಗಳ ಬಳಕೆ ಮಾಡಬೇಕು. ಬಯಲು, ರಸ್ತೆ ಬದಿ ಮಲವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹವರಿಗೆ ಗ್ರಾಮ ಪಂಚಾಯಿತಿಯಿಂದ ಸೌಲಭ್ಯಗಳನ್ನು ನಿಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆಂಪಯ್ಯ ಎಚ್ಚರಿಕೆ ನೀಡಿದರು.