ಮೈಸೂರು: ಶಾಲಾ ಪಠ್ಯದಲ್ಲಿ ಇತಿಹಾಸವನ್ನು ಇತಿಹಾಸವಾಗಿಯೇ ಬೋಧಿಸಬೇಕು. ಅಲ್ಲಿ ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ತಿದ್ದದೇ ಮಕ್ಕಳಿಗೆ ಇತಿಹಾಸದಲ್ಲಿ ಇರುವಂತೆಯೇ ಹೇಳಿಕೊಡಬೇಕು. ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯ ಅಳವಡಿಸಬೇಕು ಎಂದು ಇಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಪಾರಂಪರಿಕ ಕಟ್ಟಡಗಳ ಉಳಿವು ಎಂದರೆ ಕಟ್ಟಡವನ್ನು ನೆಲಸಮ ಮಾಡುವುದು ಮತ್ತು ಮರು ನಿರ್ಮಾಣ ಮಾಡುವುದು ಅಲ್ಲ. ಕಟ್ಟಡಗಳ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.