ಶುಕ್ರವಾರ, ಮಾರ್ಚ್ 31, 2023
22 °C

ಮನುಷ್ಯರ ಕೊಲ್ಲುವ ಚಿರತೆಗೆ ಗುಂಡಿಕ್ಕುವುದೇ ಪರಿಹಾರ: ಕೃಪಾಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿರುವ, ಗಾಯಗೊಂಡ ಅಥವಾ ವಯಸ್ಸಾದ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಅಂಥವುಗಳನ್ನು ನಿಖರವಾಗಿ ಗುರುತಿಸಿ ಗುಂಡಿಕ್ಕುವುದೇ ಪರಿಹಾರ’ ಎಂದು ವನ್ಯಜೀವಿ ತಜ್ಞ ಕೃಪಾಕರ ಹೇಳಿದರು.

ಇಲ್ಲಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ಚಿರತೆಯಿಂದ ಎಲ್ಲ ಚಿರತೆಗಳ ಮೇಲೂ ಜನರಲ್ಲಿ ಮೂಡುವ ದ್ವೇಷ ಅವುಗಳ ಸಂತತಿಯನ್ನೇ ನಾಶ ಮಾಡಬಲ್ಲದು. ಹೀಗಾಗಿ ವಿಶೇಷ ವಿಧಾನಗಳಿಂದ ನಿರ್ದಿಷ್ಟ ಚಿರತೆಯನ್ನು ಗುರುತಿಸಿ ಗುಂಡಿಕ್ಕಬೇಕು’ ಎಂದು ಪ್ರತಿಪಾದಿಸಿದರು.

‘ಚಿರತೆ ಗಣತಿ ಕಷ್ಟ. ಕರ್ನಾಟಕದಲ್ಲಿ ಕಾಡಿಗಿಂತಲೂ ನಾಡಿನಲ್ಲೇ ಸಾವಿರಾರು ಚಿರತೆಗಳಿವೆ. ಜನರೇ ಅವುಗಳಿಗೆ ವಿಷ ಹಾಕುವ ಅಥವಾ ಹೇಗಾದರೂ ಕೊಲ್ಲಲು ಮುಂದಾದರೆ ಕಷ್ಟವಾಗುತ್ತದೆ. ಸಂತತಿಯ ಉಳಿವಿಗಾಗಿ ಒಂದು ಚಿರತೆಯು ಪ್ರಾಣ ತ್ಯಾಗ ಮಾಡಬೇಕಾಗುತ್ತದೆ’ ಎಂದರು.

‘ಮನುಷ್ಯ, ಭೂಮಿಯ ಮೇಲಿರುವ 80 ಲಕ್ಷ ಜೀವಿಗಳ ವಿರುದ್ಧವಿದ್ದಾನೆ. ವನ್ಯಜೀವಿಗಳ ಸಮಸ್ಯೆಗಳನ್ನು ಗ್ರಹಿಸುವ ಸಾವಧಾನ ಅವನಿಗೆ ಇಲ್ಲವಾಗಿದೆ. ಸೂಕ್ಷ್ಮತೆಗಳು ಮಾಯವಾಗಿವೆ. ಅದೇ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು