ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಗುರುವಾರ ನಡೆಸಲಾಯಿತು.
ಮುಂಜಾನೆಯಿಂದಲೇ ಹೋಮ–ಹವನ ನೆರವೇರಿತು. ವಿವಿಧ ನದಿಗಳಿಂದ ತರಲಾದ ಜಲದಿಂದ ಶ್ರೀದತ್ತ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಂಗಳಾರತಿ ಮಾಡಿದರು. ಕಾರ್ಯ ಸಿದ್ದಿ ಹನುಮಾನ್ ಮಂದಿರದ ಮುಂಭಾಗ ಸ್ಥಾಪಿಸಿರುವ ಸ್ವಾಮಿಗೆ ಸ್ವಾಮೀಜಿ ಅರ್ಚನೆ ಮತ್ತು ಪೂಜೆ ಸಲ್ಲಿಸಿದರು. ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಇದ್ದರು.
ಪ್ರವಚನಕಾರ ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ‘ಕಲಿಯುಗದಲ್ಲಿ ಆ ವೆಂಕಟೇಶ್ವರನ ಸ್ಮರಣೆಯೊಂದೇ ನಮಗೆಲ್ಲರಿಗೂ ಆಸರೆಯಾಗಿದೆ. ನಾವೆಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಪ ಕಾರ್ಯಗಳನ್ನು ಮಾಡಿರುತ್ತೇವೆ. ಹಾಗಾಗಿಯೇ ಇಂದು ತೊಂದರೆ–ಸಂಕಟ ಅನುಭವಿಸುತ್ತಿದ್ದೇವೆ. ಈ ಪಾಪಗಳು ಹೋಗಬೇಕಾದರೆ ವೆಂಕಟರಮಣನ ಸ್ಮರಣೆಯಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಟಿವಿ, ಸಾಮಾಜಿಕ ಮಾಧ್ಯಮದಲ್ಲಿ ಕೇವಲ ಕೆಟ್ಟದ್ದನ್ನೇ ಕೇಳಿ ಎಲ್ಲರ ಮನಸ್ಸು ವಿಕಾರಗೊಂಡಿದೆ; ಎಲ್ಲರೂ ಅಸೂಯಾಪರರಾಗಿ ಬಿಟ್ಟಿದ್ದಾರೆ. ಎಲ್ಲೂ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಬಳಿಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.