ಮೈಸೂರು: ವಿದ್ಯಾರ್ಥಿಗಳು ಭಯ ಬಿಟ್ಟು, ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಲಯ ವ್ಯವಸ್ಥಾಪಕ ಯುಕ್ತೇಶಾನಂದ ಸ್ವಾಮೀಜಿ ಸಲಹೆ ನೀಡಿದರು.
ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ವಿಜಯನಗರದಲ್ಲಿರುವ ಕೊಂಕಣಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆ ಎಂಬ ಭಯ ಗೆದ್ದರೆ, ಜೀವನದಲ್ಲಿ ಏನಾದರೂ ಸಾಧಿಸಬಹುದು. ಗುರಿ ಇಟ್ಟುಕೊಂಡು ಓದಿದರೆ ಫಲಿತಾಂಶ ಉತ್ತಮವಾಗಿ ಬರಲಿದೆ. ಜೊತೆಯಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ, ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ಸಿಗಲಿದೆ. ಓದಿನ ಮೇಲಿನ ಉತ್ಸಾಹವು ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.
ಮೈಸೂರು ತಾಲ್ಲೂಕಿನ ಇಲವಾಲದ ಕೆಪಿಎಸ್ ಪ್ರೌಢಶಾಲೆ, ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆ, ಹಿನಕಲ್ನ ಸರ್ಕಾರಿ ಪ್ರೌಢಶಾಲೆ, ಮಂಚೇಗೌಡನಕೊಪ್ಪಲಿನ ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಡಿಡಿಪಿಐ ಎಚ್.ಕೆ. ಪಾಂಡು, ಮೈಸೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿವೇಕಾನಂದ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಜಾನ್ ವಿಲಿಯಂ ಡಿಸೋಜ, ಉಪಾಧ್ಯಕ್ಷ ಎಸ್.ಆರ್.ಲೋಬೊ, ಕಾರ್ಯದರ್ಶಿ ಜಾಯ್ಸ್ ಸಿಕ್ವೇರಾ ಪಾಲ್ಗೊಂಡರು.