ಚನ್ನಪಟ್ಟಣ: ರೆಬೆಲ್ ಸ್ಟಾರ್ ಅಂಬರೀಷ್ ನಿಧನರಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ಅಂಬಿ ಅಭಿಮಾನಿಗಳು ಭಾನುವಾರ ಪುಣ್ಯತಿಥಿ ಕಾರ್ಯ ನಡೆಸಿದರು.
ಅಂಬರೀಷ್ ಅಭಿಮಾನಿಗಳು ಅತಿಹೆಚ್ವಿನ ಸಂಖ್ಯೆಯಲ್ಲಿರುವ ಗ್ರಾಮದಲ್ಲಿ ಅಂಬಿ ನಿಧನರಾದ ಸುದ್ದಿ ಕೇಳಿ ಇಡೀ ಗ್ರಾಮವೇ ಶೋಕ ವ್ಯಕ್ತಪಡಿಸಿತ್ತು. ಗ್ರಾಮದ ಮುಂಭಾಗ ಅಂಬರೀಷ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದರು.
ಭಾನುವಾರ ಗ್ರಾಮದಲ್ಲಿ ಪುಣ್ಯತಿಥಿ ಕಾರ್ಯಕ್ರಮ ನೆರವೇರಿಸಲಾಯಿತು. ಮಾಂಸಾಹಾರ ತಯಾರಿಸಿ, ಅಂಬರೀಷ್ ಭಾವಚಿತ್ರದ ಮುಂದೆ ಮದ್ಯ ಇಟ್ಟು ತಮ್ಮ ನೆಚ್ಚಿನ ನಟನಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು.
ಅಂಬರೀಷ್ ನೆಚ್ಚಿನ ಊಟವಾದ ಮಟನ್ ಸಾಂಬರ್, ಚಿಕನ್ ಚಾಪ್ಸ್, ಮುದ್ದೆ, ಅನ್ನ ತಯಾರು ಮಾಡಿದ ಅಂಬಿ ಅಭಿಮಾನಿಗಳು, ಗ್ರಾಮಸ್ಥರಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ಭರ್ಜರಿ ಬಾಡೂಟ ಹಾಕಿದರು.