ಟಿಪ್ಪು ನಗರದಲ್ಲಿ ಬಹಳಷ್ಟು ಚರಂಡಿಗಳು ಹೊಡೆದು ಹೋಗಿವೆ. ಕೆಲವು ಕಳಪೆ ಕಾಮಗಾರಿ ಪರಿಣಾಮ ಅಲ್ಲಲ್ಲಿ ಕುಸಿದಿವೆ. ನೀರು ಹರಿಯದೇ ಮುಚ್ಚಿ ಹೋಗಿವೆ. ಹಿಂದಿನ ವರ್ಷದ ಮಳೆಗಾಲದಲ್ಲಿ ಮಳೆ ನೀರು, ಚರಂಡಿ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿತ್ತು. ಈ ಬಾರಿ ಮಳೆಗಾಲ ಆರಂಭಕ್ಕೂ ಮೊದಲೆ ಮನವಿ ನೀಡಿದ್ದರೂ ಗಮನಹರಿಸಿಲ್ಲ ಎಂದು ಆರೋಪಿಸಿದರು.
ಅಂಬೇಡ್ಕರ್ ನಗರ, ಟಿಪ್ಪುನಗರದ ಹಲವು ಭಾಗಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರ ನಿರ್ಲಕ್ಷ್ಯದ ಪರಿಣಾಮ ಸಮಸ್ಯೆ ಹೆಚ್ಚಾಗಿದೆ. ತಕ್ಷಣ ನೀರಿನ ಸಮಸ್ಯೆ ಬಗೆಹರಿಸಬೇಕು. ರಸ್ತೆಗಳು ಸಂಪೂರ್ಣ ಹಾಳಾಗಿವೆ. ವಾಹನ ಸಂಚಾರ ದಟ್ಟಣೆ ಪರಿಣಾಮ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.