ಕೊಲೆ: ಒಂಭತ್ತು ಆರೋಪಿಗಳ ಬಂಧನ

ರಾಯಚೂರು: ನಗರದ ಗಂಗಾನಿವಾಸ ಪ್ರದೇಶದಲ್ಲಿ ಈಚೆಗೆ ನಡೆದ ಪರಕೋಟಾ ಸಲ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಸದರ್ ಬಜಾರ್ ಠಾಣೆ ಪೊಲೀಸರು ಒಂಭತ್ತು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 1ರಂದು ರಾತ್ರಿ 11.30ಕ್ಕೆ ಪರಕೋಟಾ ನಿವಾಸಿ ಸಲ್ಮಾನ್ನ್ನು ಮುಂಗ್ಲಿ ಪ್ರಾಣದೇವರ ದೇವಸ್ಥಾನ ಎದುರು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ತಿಳಿಸಿದರು.
ಕೊಲೆಯಾದ ಸಲ್ಮಾನನೊಂದಿಗೆ ಆರೋಪಿ ಅಜ್ಜುಖಾನ್ ಹಣಕಾಸಿನ ವ್ಯವಹಾರವಿತ್ತು. ಮತ್ತೊಬ್ಬ ಆರೋಪಿ ಕಿಂಗ್ಖಾನ್, ಸಲ್ಮಾನ್ನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದ. ಆನಂತರ ಆರೋಪಿಗಳೆಲ್ಲ ಒಟ್ಟಾಗಿ ಕೊಲೆ ಮಾಡಿದ್ದಾರೆ ಎಂದು ವಿವರಿಸಿದರು.
ಅಜ್ಜುಖಾನ್, ಸೋಹೆಲ್, ಇರ್ಫಾನ್, ಜಾವೀದ್, ಇಬ್ರಾಹಿಂ, ಸಮೀರ್ ಅಲಿಯಾಸ್ ಕಿಂಗ್ ಖಾನ್, ಭಕ್ತಿಯಾರ್, ಹೈದರ್,ನವಾಬ್ ಸೇರಿ ಬಂಧಿತ ಆರೋಪಿಗಳು. ಅಜ್ಜುಖಾನ್ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿವೆ. ಉಳಿದ ಆರೋಪಿಗಳ ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೆ ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರೋಪಿಗಳ ಬಂಧನಕ್ಕಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿಎಸ್ಪಿ ಶಿವನಗೌಡ ಪಾಟೀಲ್ ಅವರು ಮಾರ್ಗದರ್ಶನದಲ್ಲಿ ಪೂರ್ವ ವಲಯ ಸಿಪಿಐ ಎಂ.ಡಿ ಫಸಿಯುದ್ದಿನ್, ಸದರ ಬಜಾರ್ ಪಿಎಸ್ಐ ಮಂಜುನಾಥ ಟಿ.ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀನಿವಾಸ, ಗೌಸ್ಪಾಷಾ, ವೆಂಕಟೇಶ, ಲಾಲೆಸಾಬ್ ಅಬ್ದುಲ್ ಖಾದರ್, ಬಸವರಾಜ ಅವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು. ಕ್ಷೀಪ್ರಗತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಪಿಐ ಎಂ.ಡಿ ಫಸಿಯುದ್ದೀನ್ ಅವರ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.