ಶಕ್ತಿನಗರ: ಜನಾಶೀರ್ವಾದ ಯಾತ್ರೆಗಾಗಿ ರಾಯಚೂರು ಜಿಲ್ಲೆಗೆ ಬುಧವಾರ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನುಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಕ್ತಿನಗರದ ಕೃಷ್ಣಾನದಿ ಸೇತುವೆ ಬಳಿ ಕ್ರೇನ್ ನೆರವಿನಿಂದ 100 ಕೆಜಿ ತೂಕದ ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸಚಿವರ ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಸೇಬು ಹಣ್ಣುಗಳನ್ನು ಜನರು ಮತ್ತು ಬಿಜೆಪಿ ಕಾರ್ಯಕರ್ತರು ಮುಗಿಬಿದ್ದು ಕಿತ್ತುಕೊಂಡರು.
ಶಕ್ತಿನಗರದಿಂದ ದೇವ ಸೂಗೂರು ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದವರೆಗೆ, ಘೋಷಣೆಗಳೊಂದಿಗೆ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ದೇವರ ದರ್ಶನ ಪಡೆದು ರಾಯಚೂರಿನತ್ತ ತೆರಳಿದರು.
ದೇವಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.