ಶಕ್ತಿನಗರ: ಆರ್ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಬೂದಿಯ ಸಾಗಣಿಕೆ ಬಂದ್ ಮಾಡಿ ನಿಗಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ. ಬೂದಿ ಸಾಗಣಿಕೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕಾರ್ಮಿಕರು ಕೆಲಸ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಕೆಲಸ ನೀಡಿ ಎಂದು ಜಯ ಕರ್ನಾಟಕ ಸಂಘಟನೆ ಸಮಿತಿಯ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ ಅವರು ಇಂಧನ ಸಚಿವರಿಗೆ ಮನವಿ ಮಾಡಿದರು.
ಬೂದಿ ಸಾಗಣಿಕೆಯನ್ನು ಎರಡು ತಿಂಗಳಿಂದ ಬಂದ್ ಮಾಡಲಾಗಿದೆ. ನಿರ್ವಹಣೆಯ ಮತ್ತು ತಾಂತ್ರಿಕ ದೋಷ ಕಾಮಗಾರಿ ಇದೆ ಎಂಬ ನೆಪ ಹೇಳಿ ಬಂದ್ ಮಾಡಿದ್ದಾರೆ ಎಂದರು.
ಕೂಡಲೇ ಬೂದಿ ಸಾಗಾಣಿಕೆ ಪುನರಾಂಭಿಸಿ ಕಾರ್ಮಿಕರ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ, ದೇವಸೂಗೂರು ಹೋಬಳಿ ಅಧ್ಯಕ್ಷ ಟಿ.ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ, ಗ್ರಾಮ ಘಟಕ ಅಧ್ಯಕ್ಷ ನರಸಪ್ಪ ಉಪಸ್ಥಿತರಿದ್ದರು.