ಮಾನ್ವಿ: ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಗೆ ತಹಶೀಲ್ದಾರ್ ಕುಮ್ಮಕ್ಕು ನೀಡಿದ್ದಾರೆ ಎನ್ನಲಾದ ಸಂಭಾಷಣೆ ಇರುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಆಡಿಯೊ ಬಹಿರಂಗ ಆಗುತ್ತಿದ್ದಂತೆಯೇ ತಹಶೀಲ್ದಾರ್ ಸಂತೋಷರಾಣಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
‘ತಹಶೀಲ್ದಾರ್ ಸಂತೋಷರಾಣಿ ಅಕ್ರಮ ಮರಳು ದಂಧೆಕೋರರ ಜತೆಗೆ ಶಾಮೀಲಾಗಿ ಒಂದು ತಿಂಗಳಿಗೆ ಪ್ರತಿ ಟಿಪ್ಪರ್ಗೆ ₹30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನೈಸರ್ಗಿಕ ಸಂಪತ್ತು ಲೂಟಿ ಮಾಡಲು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತಹಶೀಲ್ದಾರ್ ಅಡಿಯೊ ಸಂಭಾಷಣೆ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಪ್ರಧಾನ ಸಂಚಾಲಕ ಅರಳಪ್ಪ ಯದ್ದಲದಿನ್ನಿ, ಸಂಚಾಲಕರಾದ ಪಿ.ಅನಿಲ್ಕುಮಾರ, ಪ್ರಭುರಾಜ ಕೊಡ್ಲಿ, ಎಸ್.ಎಂ.ಶಾನವಾಜ್, ಹನುಮಂತ ಕೋಟೆ, ರಮೇಶ ಕರೇಗುಡ್ಡ, ಪ್ರದೀಪ ಕಪಗಲ್, ಎಂ.ಡಿ.ನುಸ್ರತ್, ಶೇಖ್ ಮೈನುದ್ದೀನ್ ಮತ್ತು ಸಾಬಿರ್ ಪಾಷಾ ಇದ್ದರು.