ರಾಯಚೂರು: ಕೇಂದ್ರ ಸರ್ಕಾರವು ದೇಶದಲ್ಲಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು, ಬ್ರಿಟಿಷರಿಗಿಂತಲೂ ಅಪಾಯಕಾರಿಯಾದ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ಬಾಮ್ಸೆಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ವಾಮನ್ ಮೇಶ್ರಾಂ ಹೇಳಿದರು.
ನಗರದ ಮಹಿಳಾ ಸಮಾಜದ ಆವರಣದಲ್ಲಿ ಬಹುಜನ ಕ್ರಾಂತಿ ಮೋರ್ಚಾದಿಂದ ಸೋಮವಾರ ಏರ್ಪಡಿಸಿದ್ದ ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಿಎಎ ಕಾಯ್ದೆಯನ್ನು ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿಗೆ ಆಗ್ರಹಿಸಿ ಪತಿವರ್ತನಾ ಯಾತ್ರಾ ಬಹಿರಂಗ ಸಮಾವೇಶ’ದಲ್ಲಿ ಭಾನುವಾರ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಮತ್ತು ಬ್ರಾಹ್ಮಣರ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಸಂವಿಧಾನ ಬಿಟ್ಟು ಮಾತನಾಡಕೂಡದು ಎನ್ನುವ ಪ್ರಜ್ಞೆ ಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮತಬ್ಯಾಂಕ್ ಎಂದು ನೋಡಿದೆ. ಜನತಂತ್ರ ವ್ಯವಸ್ಥೆಯಲ್ಲಿ ತಿಳಿವಳಿಕೆ ತುಂಬಾ ಅಗತ್ಯ. ಇದಕ್ಕಾಗಿ ಸರಿಯಾಗಿ ಪಡೆದುಕೊಳ್ಳಬೇಕು. ಚಾಕು, ಚೂರಿಯಿಂದ ಏನೂ ಸಾಧ್ಯವಿಲ್ಲ. ಸಂಘಟಿತ, ಜಾಣತನದ ಹೋರಾಟದಿಂದ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.
ಒಟ್ಟು ಮತದಾನದಲ್ಲಿ ಶೇ 35 ರಷ್ಟು ಮತಗಳನ್ನು ಪಡೆದವರು 300 ಸ್ಥಾನಗಳನ್ನು ಹೇಗೆ ಪಡೆಯುವುದಕ್ಕೆ ಸಾಧ್ಯವಾಯಿತು. ಇವಿಎಂ ಯಂತ್ರದಲ್ಲಿನ ದೋಷ ಹೊರಬಂದರೆ ಮಾತ್ರ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.