ರಾಯಚೂರು: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಲಿಕಾಭಾಗ್ಯ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ ಸಿಎಸ್ಸಿಗಳಲ್ಲಿರುವ ತಾಂತ್ರಿಕ ಸಮಸ್ಯೆ ನಿವಾರಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಸಂಘಗಳ ಜಿಲ್ಲಾ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರಿಗೆ ಕಲಿಕಾ ಭಾಗ್ಯ ಯೋಜನೆಯಡಿ ಡಿಬಿಟಿ ಮುಖಾಂತರ ಕಾರ್ಮಿಕರ ಖಾತೆಗೆ ಹಣ ಜಮಾ ಆಗುವ ಪದ್ದತಿ ಜಾರಿಗೆ ಬಂದಿದೆ. ಅರ್ಜಿ ಸಲ್ಲಿಸಲು ಅನೇಕ ಮಾಹಿತಿ ಸಿಎಸ್ಸಿ ತಂತ್ರಾಂಶದಲ್ಲಿ ಸ್ಪಷ್ಟ ಆದೇಶ ಹಾಗೂ ನಿಯಮಗಳನ್ನು ಗೊತ್ತುಪಡಿಸಿಲ್ಲ. ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ತರಬೇತಿ ನೀಡಿಲ್ಲ ಎಂದು ದೂರಿದರು.
ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮದುವೆ ಸಹಾಯಧನ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು. ಕಟ್ಟಡ ಕಾರ್ಮಿಕರು ಸ್ವಾಭಾವಿಕ ಮರಣ ಹೊಂದಿದ್ದಲ್ಲಿ ₹2 ಲಕ್ಷ ಪರಿಹಾರ ಧನ ನೀಡಬೇಕು.
ಕಲಿಕಾ ಭಾಗ್ಯ ಯೋಜನೆಯಡಿ ಈಗಾಗಲೆ ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳನ್ನು ಸಲ್ಲಿಕೆಯಾಗಿದ್ದು ಮಂಜುರಾತಿ ಆಮೆಗತಿಯಲ್ಲಿ ಚುರುಕಾಗಿ ವಿಲೇವಾರಿ ಮಾಡಬೇಕು. ಬೋಗಸ್ ಕಾರ್ಡ್ ಪಡೆದವರ ಬಗ್ಗೆ ಗಮನಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಘದ ಧ್ಯಕ್ಷ ವೀರಣ್ಣ, ತಿಮ್ಮಪ್ಪಸ್ವಾಮಿ, ರಂಗಪ್ಪ, ಡಿ.ಶರಣಬಸವ, ಬಿ.ಎನ್. ಯೇಸುರಾಜ, ಎನ್.ನಾಗರಾಜ, ಚಿನ್ನಪ್ಪ, ಬಿ. ಸದಾನಂದ, ಕರೆಪ್ಪ ಇದ್ದರು.