ರಾಯಚೂರು: ಪೆಟ್ರೊಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ವಿರೋಧಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಈಗಾಗಲೇ ಕೋವಿಡ್–19 ಲಾಕ್ ಡೌನ್ನಿಂದಾಗಿ ಆರ್ಥಿಕ ಚಟುವಟಿಕೆ, ಕಾರ್ಖಾನೆಗಳು ಪುನಶ್ಚೇತನಗೊಂಡಿಲ್ಲ. ಸರ್ಕಾರ ಘೋಷಿಸಿದ ಪರಿಹಾರವೂ ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ಸತತವಾಗಿ ಪೆಟ್ರೊಲ್– ಡಿಸೆಲ್ ದರ ಏರಿಕೆ ಮಾಡುತ್ತಿರುವುದು ಖಂಡನೀಯ. ದರ ಏರಿಕೆಯಿಂದ ವಾಹನ ಮಾಲೀಕರಿಗೆ ಸಮಸ್ಯೆಯಾಗದೇ ಅಗತ್ಯ ವಸ್ತುಗಳ ದರವೂ ಏರಿಕೆಯಾಗುತ್ತದೆ. ದರ ಏರಿಕೆ ಮಾಡುವ ಮೂಲಕ ತೈಲ ಕಂಪನಿ ಹಾಗೂ ಕೇಂದ್ರ ಸರ್ಕಾರ ಹಗಲು ದರೋಡೆಗೆ ಮುಂದಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಧಿಕಾರಿಗಳಾದ ಶರಣ ಬಸವ, ವರಲಕ್ಷ್ಮೀ, ಎಚ್. ಪದ್ಮಾ ಮತ್ತಿತರರು ಇದ್ದರು.