ಶಕ್ತಿನಗರ: ಯಾಪಲದಿನ್ನಿ ಗ್ರಾಮದ ಕೃಷ್ಣಾ ನದಿ ಪಾತ್ರದಲ್ಲಿರುವ ರೈತ ಜಂಗಲಪ್ಪ ಅವರ ಭತ್ತದ ಗದ್ದೆಯಲ್ಲಿ ಶನಿವಾರ ಮೊಸಳೆಯೊಂದು ಕಾಣಿಸಿಕೊಂಡಿದೆ.
ಗ್ರಾಮದ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ನ ಕಾರ್ಯದರ್ಶಿ ನರಸಿಂಹಲು ಮೊಸಳೆ ಕಾಣಿಸಿಕೊಂಡ ಕುರಿತು ರಾಯಚೂರು ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ ಅವರಿಗೆ ಮಾಹಿತಿ ನೀಡಿದರು.
ಚಂದ್ರಬಂಡ ಗಸ್ತಿನ ಅರಣ್ಯ ರಕ್ಷಕ ಯಲ್ಲಪ್ಪ ಮರ್ಚೆಡ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಡೊಂಗರಾಂಪುರ ಗ್ರಾಮದ ಮೀನುಗಾರರ ನೆರವಿನೊಂದಿಗೆ ಬಲೆ ಹಾಕಿ ಮೊಸಳೆ ಹಿಡಿದರು.
ಇದು ಅಂದಾಜು 3 ರಿಂದ 4 ವರ್ಷದ ಮೊಸಳೆ. ಸುಮಾರು 1.5 ಮೀಟರ್ನಷ್ಟು ಉದ್ದವಿದೆ. ಯಾಪಲದಿನ್ನಿ ಗ್ರಾಮದ ಹಳ್ಳ, ಬಾವಿ ಹಾಗೂ ರೈತರ ಜಮೀನುಗಳಲ್ಲಿ ಆಗಾಗ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿತ್ತು. ಜನ ಸಂಚಾರವಿಲ್ಲದ ಕೃಷ್ಣಾ ನದಿಯ ಜುರಾಲ ಡ್ಯಾಂ ಹಿನ್ನೀರಿನಲ್ಲಿ ಅದನ್ನು ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಅಬ್ದುಲ್ ಬಾಷಾ, ಯಾಪಲದಿನ್ನಿ ಪೊಲೀಸ್ ಠಾಣೆ ಕಾನ್ಸ್ಟೆಬಲ್ ನಾಗರಾಜ, ಮೀನುಗಾರ ಭಗವಂತ, ಗ್ರಾಮದ ಅಂಬರೀಶ, ಜಂಗಲಪ್ಪ ರವಿಕುಮಾರ್ ಹಾಗೂ ಮೌಲಪ್ಪ ಇದ್ದರು.