ಚಿತ್ರದುರ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೆ ಅಪಮಾನ ಮಾಡಿದ್ದಾರೆ ಎಂದು ದಸಂಸ (ದಾದಾ ಸಾಹೇಬ್ ಡಾ.ಎನ್. ಮೂರ್ತಿ ಸ್ಥಾಪಿತ) ವಿಭಾಗೀಯ ಯುವ ಘಟಕದ ಅಧ್ಯಕ್ಷ ಎಸ್.ಎನ್.ವಿಶ್ವನಾಥಮೂರ್ತಿ ಖಂಡಿಸಿದ್ದಾರೆ.
ವಿಶ್ವವೇ ಒಪ್ಪಿಕೊಳ್ಳುವಂತಹ ಮಹಾನ್ ಮಾನವತಾವಾದಿ, ಎಲ್ಲಾ ಸಮುದಾಯಕ್ಕೆ ಮಾರ್ಗದರ್ಶಕರಾಗಿ ಸಮಾಜ ಸುಧಾರಣೆ ಮಾಡಿದಂತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೆ, ಬಿಜೆಪಿ ಮುಖಂಡರು ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.
ದೇಶದ ಸಾರ್ವಭೌಮತೆಯನ್ನು, ರಾಷ್ಟ್ರ ನಾಯಕರನ್ನು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಗೌರವಿಸಬೇಕು. ಆದರೆ, ಶಾ ಅವರು ಮದಕರಿನಾಯಕರ ಹಾಗೂ ಒನಕೆ ಓಬವ್ವಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ಅವರಿಗೆ ಮಾಡದೆ ತಾರತಮ್ಯದಿಂದ ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿರುವ ಬದಲು ಸಾರ್ವಜನಿಕ ರಂಗ ಈ ಕೂಡಲೇ ತೊರೆದು ಮನೆ, ಕುಟುಂಬಕ್ಕೆ ಸೀಮಿತರಾಗಿರುವುದು ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.