ರಾಯಚೂರು:ಕೊರೊನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿರುವುದನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಬುಧವಾರ ನಗರದ ವಿವಿಧೆಡೆ ಸಂಚರಿಸಿ, ಬಡಾವಣೆಗಳಲ್ಲಿ ಕಾಲ್ನಡಿಗೆಯಿಂದ ತೆರಳಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಅಗತ್ಯ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆದರೆ ಕೆಲ ಯುವಕರು ಅನಾವಶ್ಯಕವಾಗಿ ರಸ್ತೆ ಮೇಲೆ ತಿರುಗಾಡುತ್ತಿರುವವರ ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡು ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ತಿಳಿಸಿದರು.
ತೀನ್ ಖಂದೀಲ್, ಆರ್.ಟಿ ವೃತ್ತ, ಚಂದ್ರಮೌಳೇಶ್ವರ ವೃತ್ತ, ಅಶೋಕ ಡಿಪೋ, ಸ್ಟೇಷನ್ ವೃತ್ತ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಕೊರೊನಾ ಸೋಂಕಿನ ಬಗ್ಗೆ ಜನರು ಭಯ ಪಡೆದೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ನಗರದ ರಾಮಮಂದಿರ ಬಳಿಯಿರುವ ಪೆಟ್ರೊಲ್ ಬಂಕ್ಗೆ ಭೇಟಿ ನೀಡಿ ಪಾಸ್ ಇದ್ದವರಿಗೆ ಮಾತ್ರ ಪೆಟ್ರೊಲ್ ಹಾಕುವಂತೆ ಮಾಲಿಕರಿಗೆ ಸೂಚಿಸಿದರು. ಆನಂತರ ಬೇಸ್ತವಾರಪೇಟೆ ಬಡಾವಣೆಗೆ ತೆರಳಿ, ಮನೆಯಿಂದ ಹೊರ ಬರದಂತೆ ಅಲ್ಲಿದ್ದ ಜನರಿಗೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಲಾವಿದ ಅಮರೇಗೌಡ ಅವರು ಕೊರೊನಾ ಸೋಂಕಿನ ಬಗ್ಗೆ ಚಿತ್ರ ರಚಿಸಿರುವುದನ್ನು ಪರಿಶೀಲಿಸಿದರು.