ರಾಯಚೂರು: ವೈದ್ಯರು ದೇವರು ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದು ಖಾಸಗಿ ಆಸ್ಪತ್ರೆಗಳ ವೈದ್ಯರೆಲ್ಲರೂ ಮಾನವೀಯತೆಯ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದರು.
ಈಗ ಮಾಡುವ ಸೇವೆ ಜೀವಮಾನದವರೆಗೆ ನೆನಪಿಯಲ್ಲಿ ಉಳಿಯಲಿದೆ ಹಾಗೂ ನೆಮ್ಮದಿ ನೀಡುತ್ತದೆ. ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಸರ್ಕಾರದ ಜೊತೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದು ಶ್ಲಾಘನೀಯ. ತಂದೆ ತಾಯಿಯರ ನಂತರ ವೈದ್ಯರನ್ನು ದೇವರ ಸ್ಥಾನ ನೀಡಲಾಗಿದೆ ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಖಾಸಗಿ ವೈದ್ಯರು ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು. ಕೋವಿಡ್ನಿಂದ ತತ್ತರಿಸಿದ ಜನರಿಗೆ ವೈದ್ಯರು ನೆರವಾಗಬೇಕು. ಕೋವಿಡ್ ತಡೆಗೆ ಜಿಲ್ಲಾಡಳಿತ, ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ವ್ಯಾಪಾರವನ್ನು ಬದಿಗಿರಿಸಿ ಮಾನವೀಯತೆಯಿಂದ ಕೆಲಸ ಮಾಡಿ ಕೋವಿಡ್ನಿಂದ ಗೆಲ್ಲಬೇಕಿದೆ ಎಂದರು.
ಕೋವಿಡ್ ನಿಂದ ಜನರು ಭೀತಿಯಲ್ಲಿದ್ದು ವೈದ್ಯರು ಧೈರ್ಯ ತುಂಬಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ರೋಗಿಗಳು ಜೀವನಪರ್ಯಂತ ನೆನೆಯುತ್ತಾರೆ ಎಂದು ಹೇಳಿದರು.
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಆಮ್ಲಜನಕ, ಹಾಸಿಗೆಗಳು ಹಾಗೂ ರೆಮ್ಡಿಸಿವಿರ್ ಕೊರತೆಯಿಲ್ಲ. ಈಚೆಗೆ ಆಮ್ಲಜನಕ ಕೊರತೆಯ ಬಗ್ಗೆ ಗೊಂದಲ ಹುಟ್ಟಿಸಲಾಗಿತ್ತು. ಜಿಲ್ಲೆಗೆ ಬೇಕಾಗುವ ಅಗತ್ಯ ಪ್ರಮಾಣದ ಆಮ್ಲಜನಕ ಇದೆ. ಶನಿವಾರ 24 ಟನ್ ಆಮ್ಲಜನಕ ಸರಬರಾಜು ಆಗಿದೆ. ಎರಡು ದಿನ ಸಮಸ್ಯೆಯಿಲ್ಲ. ಮುಂದೆಯೂ ಅಗತ್ಯ ಪ್ರಮಾಣದಲ್ಲಿ ದೊರೆಯಲಿದೆ ಎಂದರು.
ಖಾಸಗಿ ಆಸ್ಪತ್ರೆಯವರು ಸಮಸ್ಯೆ ಇದ್ದರೆ ಅಗತ್ಯ ಸಂದರ್ಭದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಖಾಸಗಿ ಆಸ್ಪತ್ರೆಗಳ ಸೇವೆಗೆ ದಿನದ 24 ತಾಸು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಶಾಸಕ ಶಿವನಗೌಡ ನಾಯಕ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರಾಮಪ್ಪ, ಕಾರ್ಯದರ್ಶಿ ಡಾ.ನಾಗರಾಜ ಬಾಲ್ಕಿ ಮತ್ತಿತರರು ಇದ್ದರು.