ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೋಸ್) ಸದಸ್ಯರು ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಆಗದೇ ಇರುವುದು ಶೋಚನೀಯ. ಈಗಾಗಲೇ ಕೆಲಸಕ್ಕಾಗಿ ಅರ್ಜಿ ಹಾಕಿದ ಕಾರ್ಮಿಕರ ಕೆಲಸ ನೀಡುತ್ತಿಲ್ಲ. ಕೆಲವೊಂದು ಪಂಚಾಯಿತಿಗಳಲ್ಲಿ ಅರ್ಜಿಗಳನ್ನೇ ತೆಗೆದುಕೊಳ್ಳುತ್ತಿಲ್ಲ. ಕೆಲಸ ಮಾಡಿ ನಾಲ್ಕೈದು ತಿಂಗಳು ಕಳೆದರೂ ಇದುವರೆಗೆ ಕೂಲಿ ಪಾವತಿಯಾಗಿಲ್ಲ. ಹೊಸದಾಗಿ ಉದ್ಯೋಗ ಚೀಟಿಗೆ ಅರ್ಜಿ ಹಾಕಿದವರಿಗೆ ಉದ್ಯೋಗ ಚೀಟಿ ದೊರೆತಿಲ್ಲ. ಇವೆಲ್ಲವೂ ಜಿಲ್ಲಾ ಪಂಚಾಯಿತಿ ಆಡಳಿತದ ವೈಫಲ್ಯ ಎಂದು ದೂರಿದರು.
ಮುಖ್ಯವಾಗಿ ಅಧಿಕಾರಿಗಳು ಪಂಚಾಯಿತಿಗೆ ಬರುತ್ತಿಲ್ಲ. ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ ಯಾವುದೇ ಅರ್ಜಿಗಳು ಸ್ವೀಕರಿಸುತ್ತಿಲ್ಲ. ಕೂಲಿಕಾರರ ಕಡೆ ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳನ್ನು ಚುನಾವಣೆ ವಿಷಯ ಬಿಟ್ಟರೆ ಜನರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ತಮ್ಮ ಬೋಗಸ್ ಬಿಲ್ಗಳ ಚಿಂತೆ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಬಹಳಷ್ಟು ಅನ್ಯಾಯ ಆಗಿದೆ. ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು.
ಕೂಡಲೇ ಉದ್ಯೋಗ ಖಾತ್ರಿ ಯೋಜನೆ ಅಡಿ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗುರುರಾಜ, ಬಸವರಾಜ, ಗೌರಮ್ಮ, ಮರಿಯಮ್ಮ, ಜ್ಯೋತಿ, ಕೃಷ್ಣಪ್ರಸಾದ್ ಸೇರಿದಂತೆ ಇನ್ನಿತರ ಗ್ರಾಮೀಣ ಕೂಲಿ ಕಾರ್ಮಿಕರು ಇದ್ದರು.