ರಾಯಚೂರು: ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರು ಜಮೀನೊಂದಕ್ಕೆ ನುಗ್ಗಿ ಬೆಂಕಿಯಲ್ಲಿ ಬೆಂದುಹೋಗಿದ್ದು, ಅದರಲ್ಲಿದ್ದ ಚಾಲಕ ಸಜೀವ ದಹನವಾದ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.
ಸಿರವಾರ ತಾಲ್ಲೂಕು ಮಲ್ಲಟ ಗ್ರಾಮದ ಸದಾನಂದಗೌಡ ಮಾಲಿಪಾಟೀಲ (60) ದಹನಗೊಂಡಿದ್ದು, ರಾಯಚೂರಿನತ್ತ ಬರುವಾಗ ಈ ಅನಾಹುತ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದರೂ ಬೆಂಕಿ ಕೆನ್ನಾಲಿಗೆ ನೋಡಿ ನಿಸ್ಸಹಾಯಕರಾಗಿದ್ದಾರೆ.
ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ಬೇರೆ ಕಡೆಗೆ ಚಾಚಿಕೊಳ್ಳದಂತೆ ನಂದಿಸಿದರು. ಬೆಂಕಿ ಉರಿಯುವ ವಿಡಿಯೋ ವೈರಲ್ ಆಗಿದೆ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.