ಮಣ್ಣಿನ ತಟ್ಟೆ, ತಗಡಿನ ಡಬ್ಬಿಗಳಿಂದ ಗೂಡು ತಯಾರಿಸಿ ಅದರಲ್ಲಿ ಕಾಳು, ನೀರು ಹಾಕಿ ಶಾಲಾ-ಕಾಲೇಜು, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡ-ಮರಗಳಿಗೆ ನೇತು ಹಾಕಿ ಬರುತ್ತಾರೆ.. ಅಮರೇಗೌಡರ ಸ್ನೇಹಿತ ಮಂಜುನಾಥ ಗಾಣಗೇರಾ ಹೇಳುವ ಮಾತಿದು. ಬೀಜಗಳನ್ನು ಸಂಗ್ರಹಿಸಿ, ಸೆಗಣಿ, ಆಕಳ ಮೂತ್ರದೊಂದಿಗೆ ಬೆರಸಿ ಪ್ರತಿವರ್ಷ ಮಳೆಗಾಲದಲ್ಲಿ ತಾಪ್ಸಿ, ವಂಗೆ, ಹುಣಸೆ, ಬೇವು, ನೇರಳೆ, ಹತ್ತಿಹಣ್ಣು, ನುಗ್ಗೆ ಮತ್ತಿತರ ಬಗೆಯ 40 ಸಾವಿರ ಬೀಜದ ಉಂಡೆಗಳನ್ನು ಸಿದ್ಧಪಡಿಸಿ, ತಾಲ್ಲೂಕಿನ ಕಲಮಂಗಿ ಗುಡ್ಡಗಾಡು ಸೇರಿ ಹಲವು ಕಡೆಗಳಲ್ಲಿ ಹಾಕುವ ಕೆಲಸವನ್ನು ಅಮರೇಗೌಡ ಮಲ್ಲಾಪುರ ಮಾಡಿದ್ದಾರೆ.